
ಹಿರಿಯೂರು: ‘ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಆಹಾರ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ರೈತರು ಕೃಷಿಯ ಮೂಲಕ ಅನ್ನ ಕೊಡುವ ಜೊತೆಗೆ ದೇಶದ ಜಿಡಿಪಿಗೆ ಶೇ 18 ರಷ್ಟು ಕೊಡುಗೆ ನೀಡುತ್ತಿದ್ದಾರೆ. ಆ ಮೂಲಕ ಖಜಾನೆಗೆ ಆರ್ಥಿಕ ಶಕ್ತಿ ತುಂಬುತ್ತಿದ್ದಾರೆ’ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ತಾಲ್ಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಸಮಗ್ರ ಕೃಷಿ–ರೈತನ ಪ್ರಗತಿ ಶೀರ್ಷಿಕೆಯಡಿ ಏರ್ಪಡಿಸಿದ್ದ ಕೃಷಿ ಮತ್ತು ತೋಟಗಾರಿಕಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
‘ಇದು ಕೇವಲ ಮೇಳವಾಗಿರದೆ ರೈತರಿಗೆ ಕೃಷಿಯ ಬಗ್ಗೆ ಚೈತನ್ಯ ನೀಡುವ ಕಾರ್ಯಕ್ರಮವಾಗಿದೆ. ರೈತರಿಗೆ ನೂತನ ತಂತ್ರಜ್ಞಾನ, ನೀರಿನ ನಿರ್ವಹಣೆ, ಸಮಗ್ರಕೃಷಿ, ಪುಷ್ಪ ಕೃಷಿ, ಮೀನು ಕೃಷಿ ಮೊದಲಾದ ವಿಷಯಗಳ ಪ್ರಾತ್ಯಕ್ಷಿಕೆ ಜೊತೆಗೆ ಮಾಹಿತಿ ಕೊಡುವ ಕೆಲಸ ಇಲ್ಲಿನ ಮೇಳದಲ್ಲಿ ನಡೆದಿದೆ. ಮೋದಿಯವರ ಕೇಂದ್ರ ಸರ್ಕಾರ ದೇಶದಲ್ಲಿ 10 ಸಾವಿರ ರೈತ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಉತ್ಪಾದನೆ, ಸಂಸ್ಕರಣೆ, ಮಾರಾಟಕ್ಕೆ ಪ್ರೋತ್ಸಾಹ ಕಲ್ಪಿಸಿದೆ’ ಎಂದುರ.
‘ಕೃಷಿ ಬಳಕೆಗೆ ಅಗತ್ಯ ಎನಿಸುವ ದ್ರೋಣ್ ತಂತ್ರಜ್ಞಾನ ಬಳಕೆಗೆ ಮಹಿಳಾ ಸಂಘಗಳ ಮೂಲಕ ದ್ರೋಣ್ ಖರೀದಿಗೆ 400 ಕೋಟಿ ಬಿಡುಗಡೆ ಮಾಡಲಾಗಿದೆ. ಮಣ್ಣು ಪರೀಕ್ಷಾ ಕೇಂದ್ರಗಳು ಸದಾ ಸಕ್ರಿಯವಾಗಿವೆ. ಕಡಿಮೆ ನೀರು ಬಳಸಿ ಹೆಚ್ಚು ಬೆಳೆ ತೆಗೆಯುವ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ’ ಎಂದರು.
ದೇಶದಲ್ಲಿ ಹಲವು ಪಂಚ ವಾರ್ಷಿಕ ಯೋಜನೆಗಳು ಜಾರಿಗೊಂಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ರೈತರ ಬದುಕು ಸುಧಾರಣೆಯಾಗಿಲ್ಲ. ಕೇಂದ್ರ–ರಾಜ್ಯ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಕೃಷಿ ಮತ್ತು ತೋಟಗಾರಿಕೆ ಪದವಿ ಪಡೆದವರು ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ಮೂಲಕ ರೈತರಿಗೆ ನೆರವಾಗಬೇಕು. ಸ್ನಾತಕೋತ್ತರ ಪದವಿ ಪಡೆಯುವ ವೇಳೆಗೆ ಒಬ್ಬ ವಿದ್ಯಾರ್ಥಿಗೆ ಸರ್ಕಾರ ಕನಿಷ್ಠ 6 ಲಕ್ಷ ಖರ್ಚು ಮಾಡುತ್ತದೆ. ನೀರಾವರಿ ಹೆಚ್ಚಿದರೆ ಮಾತ್ರ ಜನರ ವಲಸೆ ತಡೆಯಬಹುದು’ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ‘ರೈತರ ಮೇಲಿನ ಶೋಷಣೆ ನಿಲ್ಲಬೇಕು ಎಂಬುದು ಕೇವಲ ಘೋಷಣೆ ಆಗಬಾರದು. ನಮ್ಮಲ್ಲಿ ಈರುಳ್ಳಿ ಬೆಳೆಗಾರರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಮಹರಾಷ್ಟ್ರದಲ್ಲಿ ಈರುಳ್ಳಿಯನ್ನು ಎಂಟತ್ತು ತಿಂಗಳು ದಾಸ್ತಾನು ಮಾಡುವ ವ್ಯವಸ್ಥೆ ಇದೆ. ನಮ್ಮಲ್ಲಿಯೂ ಇಂತಹ ವ್ಯವಸ್ಥೆ ಮಾಡುವ ಮೂಲಕ ಬೆಳೆಗಾರರ ಬೆನ್ನಿಗೆ ನಿಲ್ಲಬೇಕು’ ಎಂದರು.
‘ಕೃಷಿ ಸಚಿವರು ಈರುಳ್ಳಿ ಬೆಳೆಗಾರರ ಸಭೆ ಕರೆದು ಕಷ್ಟ ಆಲಿಸಿ ಪರಿಹಾರ ನೀಡಬೇಕು. ಮಂಡ್ಯ ಮತ್ತು ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರಗಳು ಒಂದೇ ಅವಧಿಯಲ್ಲಿ ಆರಂಭವಾಗಿದ್ದು, ಅದು ವಿಶ್ವವಿದ್ಯಾಯಲಯವಾಗಿದ್ದು, ಅಂತಹ ಭಾಗ್ಯ ಬಬ್ಬೂರು ಫಾರಂಗೆ ಬರದಿರುವುದು ಬೇಸರದ ಸಂಗತಿ’ ಎಂದರು.
ಸಮಾರಂಭದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ. ಜಗದೀಶ್, ತೋಟಗಾರಿಕೆ ಕಾಲೇಜಿನ ಮುಖ್ಯಸ್ಥ ಸುರೇಶ್ ಡಿ ಏಕಬೋಟೆ, ಸಹಸಂಶೋಧನಾ ನಿರ್ದೇಶಕ ಶರಣಪ್ಪ ಜಂಗಂಡಿ, ಹಿರಿಯ ವಿಜ್ಞಾನಿ ಪರಶುರಾಮಚಂದ್ರವಂಶಿ, ಎಚ್.ಡಿ. ದೇವಿಕುಮಾರ್, ಎಚ್.ಎಸ್.ಶಶಾಂಕ್, ಬಿ. ಹೇಮ್ಲಾನಾಯ್ಕ್, ಜಿ.ಕೆ. ಗಿರೀಶ್, ಡಾ. ಪ್ರೀತಿ, ಡಾ.ಬಿ.ಮಂಜುನಾಥ್, ಜಿ. ಸವಿತಾ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಇದ್ದರು.
ಮೇಳದಲ್ಲಿ ದೇಸಿ ತಳಿಯ ಹೋರಿಗಳು, ಕುರಿ–ಮೇಕೆ, ಅಲಂಕಾರಿಕ ಮೀನು, ಸಿರಿಧಾನ್ಯಗಳಿಂದ ಹಾಕಿದ್ದ ರಂಗೋಲಿ ಗಮನ ಸೆಳೆದವು.
ನರೇಂದ್ರ ಮೋದಿ ಕೊಡುಗೆ ಅಪಾರ
‘ನಮ್ಮ ಜಿಲ್ಲೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 1.42 ಲಕ್ಷ ರೈತರಿಗೆ ₹ 713 ಕೋಟಿ ಫಸಲ್ ಬಿಮಾ ಯೋಜನೆಯಡಿ 3.40 ಲಕ್ಷ ರೈತರಿಗೆ ₹ 722 ಕೋಟಿ (ರೈತರ ಕಂತು 113 ಕೋಟಿ) ಬಂದಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯಾಗಿದೆ’ ಎಂದು ಗೋವಿಂದ ಕಾರಜೋಳ ಹೇಳಿದರು. ‘ಎಸ್ಸಿ ಎಸ್ಟಿ ಸಮುದಾಯದವರಿಗೆ ಕೃಷಿ ಯಂತ್ರೋಪಕರಣಕ್ಕೆ ₹ 47.75 ಕೋಟಿ ಕೃಷಿ ಸಿಂಚಯಿನಿ ಯೋಜನೆಯಡಿ ತುಂತುರು ನೀರಾವರಿಗೆ 94 ಕೋಟಿ 2500 ಕೃಷಿಕರಿಗೆ ಹಸುಗಳು ಆಯುಷ್ಮಾನ್ ಭಾರತ್ ಯೋಜನೆಯಡಿ 930 ಕೋಟಿ ಮುದ್ರಾ ಯೋಜನೆಯಡಿ 389 ಕೋಟಿ ಉಜ್ವಲ ಯೋಜನೆಯಡಿ 1.63 ಲಕ್ಷ ಕುಟುಂಬಗಳಿಗೆ ಎಲ್ ಪಿಜಿ ಸಂಪರ್ಕ ಕಲ್ಪಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.