ADVERTISEMENT

ಹಿರಿಯೂರು: ಮೂವರಿಗೆ ಕೋವಿಡ್

18ಕ್ಕೇರಿದ ಪ್ರಕರಣಗಳು* ಮಧ್ಯಾಹ್ನ 2.30ರಿಂದ ಅಂಗಡಿಗಳು ಬಂದ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 13:09 IST
Last Updated 29 ಜೂನ್ 2020, 13:09 IST
ಹಿರಿಯೂರಿನಲ್ಲಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸೋಮವಾರ ಅಂಗಡಿಗಳನ್ನು ಬಂದ್ ಮಾಡಿರುವುದು.
ಹಿರಿಯೂರಿನಲ್ಲಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸೋಮವಾರ ಅಂಗಡಿಗಳನ್ನು ಬಂದ್ ಮಾಡಿರುವುದು.   

ಹಿರಿಯೂರು: ತಾಲ್ಲೂಕಿನಲ್ಲಿ ಮೂವರಿಗೆ ಕೋವಿಡ್‌–19 ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 18ಕ್ಕೇರಿದೆ. ಇವರಲ್ಲಿ 10 ಮಂದಿ ಜನ್ಮದಿನ ಆಚರಿಸಿಕೊಂಡ ಮನೆಯವರ ಜತೆ ಸಂಪರ್ಕ ಹೊಂದಿದವರಾಗಿದ್ದಾರೆ.

ವರ್ತಕರೊಬ್ಬರ 26 ವರ್ಷದ ಪುತ್ರ, ನೆಹರೂ ಮೈದಾನದಲ್ಲಿ ಕಿರಾಣಿ ವರ್ತಕರ ಸಂಪರ್ಕದಿಂದ ನೆರೆಮನೆಯ 31 ವರ್ಷದ ಪುರುಷ ಹಾಗೂ ಗೋಪಾಲಪುರ ಬಡಾವಣೆಯ 26 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ‘ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಖಚಿತ ಪಡಿಸಿದ್ದಾರೆ.

ಜೂನ್ 19ರಂದು ವೇದಾವತಿ ನಗರದ ವರ್ತಕರ ಮನೆಯಲ್ಲಿ ಮೊಮ್ಮಗನ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಂಡಿದ್ದವರಿಗೆ ಕೋವಿಡ್–19 ದೃಢಪಟ್ಟಿದೆ. ಆರಂಭದಲ್ಲಿ 65 ವರ್ಷದ ಕಿರಾಣಿ ಮತ್ತು ಸಿಮೆಂಟ್ ವರ್ತಕರೊಬ್ಬರಿಗೆ ಜೂನ್ 24ರಂದು ಕೊರೊನಾ ದೃಢಪಟ್ಟಿತ್ತು. ಆ ವೇಳೆ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದ 30 ಜನರ ಗಂಟಲಿನ ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ADVERTISEMENT

ಜೂನ್ 27ರಂದು ಬಂದಿದ್ದ ವರದಿಯಲ್ಲಿ ವರ್ತಕರ ಮನೆಗೆ ಸಂಬಂಧಿಸಿದ ಆರು ಜನರಿಗೆ ಕೊರೊನಾ ವೈರಸ್‌ ದೃಢಪಟ್ಟಿತ್ತು. ಸೋಮವಾರ ಪ್ರಥಮ ಸಂಪರ್ಕದಲ್ಲಿದ್ದ ಮೂವರಿಗೆ ಪಾಸಿಟಿವ್ ಬಂದಿದೆ. ತಾಲ್ಲೂಕಿನಲ್ಲಿರುವ 18 ಸೋಂಕಿತರಲ್ಲಿ 10 ಜನ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡವರಾಗಿದ್ದಾರೆ.

ಜೂನ್ 27 ರಿಂದ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಪಾಸಿಟಿವ್ ಬಂದವರ ಪ್ರಥಮ ಸಂಪರ್ಕದಲ್ಲಿದ್ದವರನ್ನು, ನೂರು ಮೀಟರ್ ವ್ಯಾಪ್ತಿಯಲ್ಲಿನ ವರ್ತಕರನ್ನು ಹೊರಗೆ ತಿರುಗಾಡದಂತೆ, ಅಂಗಡಿ ತೆರೆಯದಂತೆ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಶೇ 80ರಷ್ಟು ಹೋಟೆಲ್‌ಗಳನ್ನು ಮಾಲೀಕರೇ ಬಂದ್ ಮಾಡಿದ್ದಾರೆ. ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳ ಹಿನ್ನೆಲೆಯಲ್ಲಿ ಕಿರಾಣಿ, ಹಾರ್ಡ್ ವೇರ್, ಎಲೆಕ್ಟ್ರಿಕಲ್, ಚಿನ್ನಬೆಳ್ಳಿ, ಬೇಕರಿ–ಹೋಟೆಲ್, ಹೋಲ್ ಸೇಲ್ ಸೇರಿ ಎಲ್ಲ ಅಂಗಡಿಗಳನ್ನು ಮಧ್ಯಾಹ್ನ 2.30ರವರೆಗೆ ಮಾತ್ರ ತೆರಯಲಿದ್ದು, ಆನಂತರ ಮುಚ್ಚಿದ್ದರಿಂದ ಇಡೀ ನಗರದಲ್ಲಿ ಅಘೋಷಿತ ಬಂದ್ ಏರ್ಪಟ್ಟಿತ್ತು.

ಹನ್ನೊಂದು ವರದಿ ಬಾಕಿ:

’ಸೋಂಕಿತರ ಜತೆ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಐದು ಜನರ ಸ್ವ್ಯಾಬ್ ಅನ್ನು ಸೋಮವಾರ ಪ್ರಯೋಗಾಲಯಕ್ಕೆ ಕಳಿಸಿದ್ದು, ಒಟ್ಟು 15 ಜನರ ವರದಿ ಬರಬೇಕಿದೆ. ಸೋಮವಾರ ಪಾಸಿಟಿವ್ ದೃಢಪಟ್ಟಿರುವ ಮೂವರನ್ನು ಧರ್ಮಪುರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‘ ಎಂದು ಡಾ. ವೆಂಕಟೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.