
ಹೊಳಲ್ಕೆರೆ: ಜನರಲ್ಲಿ ಧರ್ಮ ಜಾಗೃತಿ ಹಾಗೂ ಹಸಿರು ಪ್ರಜ್ಞೆ ಬೆಳೆಸಲು ಜ.10 ರಿಂದ ಉತ್ತರ ಕನ್ನಡ ಜಿಲ್ಲೆಯ ಉಳವಿ ಕ್ಷೇತ್ರಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಗೋಕಾಕ ತಾಲ್ಲೂಕಿನ ಬಳಗಳದ ಬಸವ ಮಂಟಪದಿಂದ ಪಾದಯಾತ್ರೆ ಆರಂಭಿಸಲಾಗುವುದು ಎಂದು ಪಟ್ಟಣದ ಒಂಟಿ ಕಂಬದ ಮಠದ ತಿಪ್ಪೇರುದ್ರ ಸ್ವಾಮೀಜಿ ತಿಳಿಸಿದರು.
ಒಂಟಿಕಂಬದ ಮಠದಲ್ಲಿ ನಡೆದ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಕಲಘಟಗಿ ತಾಲ್ಲೂಕಿನ ಹಿರೇ ಹೊನ್ನಹಳ್ಳಿಯ ಚನ್ನಬಸವ ಸ್ವಾಮೀಜಿ ಹಾಗೂ ಉಳವಿಯ ಬಸವ ಲಿಂಗಮೂರ್ತಿ ಸ್ವಾಮೀಜಿ ನನ್ನೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವದು. ನಿತ್ಯ 20 ಕಿಲೋಮೀಟರ್ ಪಾದಯಾತ್ರೆ ನಡೆಸಲಾಗುವುದು’ ಎಂದು ಸ್ವಾಮೀಜಿ ತಿಳಿಸಿದರು.
‘ಈಚೆಗೆ ಲಿಂಗಾಯತರಲ್ಲಿ ಧರ್ಮಶ್ರದ್ಧೆ ಕಡಿಮೆಯಾಗಿದೆ. ಸಂಘಟನೆಯ ಕೊರತೆ ಇದೆ. ಧರ್ಮ ಪ್ರಚಾರದ ಅಗತ್ಯ ಇದೆ ಅನಿಸುತ್ತದೆ. ಲಿಂಗಾಯತರು ಜೀವನದಲ್ಲಿ ಒಮ್ಮೆಯಾದರೂ ಶರಣರ ಕರ್ಮಭೂಮಿಗಳ ದರ್ಶನ ಮಾಡಬೇಕು ಎಂಬುದು ನಮ್ಮ ಆಶಯ. ಪಾದಯಾತ್ರೆಯ ಉದ್ದಕ್ಕೂ ಲಿಂಗಾಯತ ಧರ್ಮ ಹಾಗೂ ಹಸಿರಿನ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು. ನಂತರ ಉಳವಿ ಚನ್ನಬಸವೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳಲಾಗುವುದು ಉದ್ದೇಶ’ ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಚವೀರಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಟಿ.ನಂದೀಶ್, ಖಜಾಂಚಿ ವಾಗೀಶ್, ಕಾರ್ಯದರ್ಶಿ ಧನಂಜಯ್, ರೈತ ಸಂಘದ ಮುಖಂಡರಾದ ಮಲ್ಲಿಕಾರ್ಜುನಪ್ಪ, ಗುರು, ಮಲ್ಲೇಶ್, ತಿಪ್ಪೇಸ್ವಾಮಿ, ಚಂದ್ರಶೇಖರ್, ಸೋಮಶೇಖರಪ್ಪ, ಎಸ್ಜೆಎಂ ಶಾಲೆಯ ಶಿಕ್ಷಕರು, ಈಚಗಟ್ಟ, ನುಲೆನೂರು, ಗಿಲಿಕೇನಹಳ್ಳಿ ಗ್ರಾಮಸ್ಥರು ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.