ಹೊಳಲ್ಕೆರೆ: ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ಗುರುವಾರ ಬೆಳಿಗ್ಗೆ 5.30ಕ್ಕೆ ಚಿತ್ರಲಿಂಗೇಶ್ವರ ಸ್ವಾಮಿಯ ಅಂಬಿನೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ದೇವಾಲಯದ ಆವರಣದಲ್ಲಿ ಬಾಳೆಕಂದು ನೆಟ್ಟು, ವಿಶೇಷ ಪೂಜೆ ಸಲ್ಲಿಸಿ ಅದನ್ನು ಕಡಿಯುವ ಮೂಲಕ ಅಂಬಿನೋತ್ಸವ ಆಚರಿಸಲಾಯಿತು. ಅಂಬು ಹೊಡೆದ ನಂತರ ಭಕ್ತರು ಉದ್ದನೆಯ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದರ್ಶನ ಪಡೆಯಲು ಆಗದಿದ್ದವರು ದೇವಾಲಯದ ಹೊರಗೆ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದರು.
ಈ ಅಂಬಿನೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬಂದಿದ್ದರು. ಹರಕೆ ಹೊತ್ತವರು ಎತ್ತಿನ ಗಾಡಿಗಳಲ್ಲಿ ಬಂದು ಹರಕೆ ಒಪ್ಪಿಸಿದರು. ಜಾತ್ರೆಯಲ್ಲಿ ಆಟಿಕೆ, ಕಾರ, ಮಂಡಕ್ಕಿ, ಸಿಹಿ ತಿಂಡಿಗಳ ವ್ಯಾಪಾರ ಬಿರುಸಿನಿಂದ ನಡೆಯಿತು.
ಭಕ್ತರ ಸುರಕ್ಷತೆಗಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಚಿತ್ರದುರ್ಗ, ಹೊಸದುರ್ಗ, ದಾವಣಗೆರೆ, ಶಿವಮೊಗ್ಗ ಕಡೆಗಳಿಂದ ಬರುವ ಭಕ್ತರಿಗೆ ಅನುಕೂಲ ಆಗುವಂತೆ ಹೆಚ್ಚುವರಿ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸಂಜೆಯವರೆಗೂ ಬಂದ ದೇವರ ದರ್ಶನ ಪಡೆದರು.
ಮನೆ ಅಥವಾ ಹೊಲಗಳಲ್ಲಿ ಹಾವು, ಚೇಳಿನಂತಹ ವಿಷಜಂತುಗಳು ಕಾಣಿಸಿಕೊಂಡಾಗ ದೇವಾಲಯಕ್ಕೆ ಬರುವುದಾಗಿ ಚಿತ್ರಲಿಂಗೇಶ್ವರ ಸ್ವಾಮಿಗೆ ಹರಕೆ ಹೊರುತ್ತಾರೆ. ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯಲಿದ್ದು, ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಕೆಲವರು ದೂರದ ಊರುಗಳಿಂದ ಕಾಲ್ನಡಿಗೆಯಲ್ಲಿ ಜಾತ್ರೆಗೆ ಬರುತ್ತಾರೆ.
‘ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿಯಿಂದ ಭಕ್ತರಿಗೆ ಕುಡಿಯುವ ನೀರು, ಸ್ವಚ್ಛತೆ, ವೈದ್ಯಕೀಯ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯ ಚಿತ್ರಹಳ್ಳಿ ಗೇಟ್ನ ರಾಷ್ಟ್ರೀಯ ಹೆದ್ದಾರಿ– 13ರಿಂದ 2 ಕಿ.ಮೀ. ದೂರದಲ್ಲಿದ್ದು, ಮುಖ್ಯರಸ್ತೆಯಿಂದಲೇ ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಜಾತ್ರೆ ಸುಗಮವಾಗಿ ನಡೆಯಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಭಕ್ತರು ಹೆಚ್ಚು ಉತ್ಸಾಹದಿಂದ ಜಾತ್ರೆಯಲ್ಲಿ ಪಾಲ್ಗೊಂಡರು.
ಶಾಸಕ ಎಂ.ಚಂದ್ರಪ್ಪ, ಲವಕುಮಾರ್, ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಸ್ವಾಮಿ, ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ತಹಶೀಲ್ದಾರ್ ವಿಜಯ ಕುಮಾರ, ಚಿತ್ರಹಳ್ಳಿ ಪಿಎಸ್ಐ ಕಾಂತರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.