ಹೊಳಲ್ಕೆರೆ: ತಾಲ್ಲೂಕಿನ ತಾಳಕಟ್ಟದಲ್ಲಿರುವ ಅಯ್ಯಣ್ಣನಕಟ್ಟೆ ಕೆರೆಯ ಹೂಳು ತೆಗೆದು ಅಭಿವೃದ್ಧಿ ಮಾಡಲಾಗುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ದಿನೇಶ್ ಪೂಜಾರಿ ಹೇಳಿದರು.
ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ಅಯ್ಯಣ್ಣನಕಟ್ಟೆ ಕೆರೆ 12 ಎಕರೆ ವಿಸ್ತೀರ್ಣ ಹೊಂದಿದ್ದು, ₹15 ಲಕ್ಷ ವೆಚ್ಚದಲ್ಲಿ ಅದನ್ನು ಅಭಿವೃದ್ಧಿ ಮಾಡಲಾಗುವುದು. ಕೆರೆ ಏರಿ ಭದ್ರಗೊಳಿಸಲಾಗುವುದು. ಮೂರುಕಾಲು ಅಡಿ ಹೂಳು ತೆಗೆದು ಹೆಚ್ಚು ನೀರು ನಿಲ್ಲುವಂತೆ ಮಾಡಲಾಗುವುದು. ಹೂಳನ್ನು ಗ್ರಾಮಸ್ಥರು ತಮ್ಮ ಟ್ರ್ಯಾಕ್ಟರ್ಗಳಲ್ಲಿ ತೋಟಗಳಿಗೆ ಸಾಗಿಸುತ್ತಾರೆ’ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 850 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಪೈಕಿ ತಾಲ್ಲೂಕಿನಲ್ಲಿ 11 ಕೆರೆಗಳೂ ಇವೆ. ಹೂಳೆತ್ತುವುದರಿಂದ ಕೆರೆಗಳಲ್ಲಿ ಹೆಚ್ಚು ನೀರು ಸಂಗ್ರವಾಗಿ ಅಂತರ್ಜಲ ಹೆಚ್ಚುತ್ತದೆ. ಇದರಿಂದ ಕೊಳವೆ ಬಾವಿಗಳಲ್ಲಿ ನೀರಿನ ಸೆಲೆ ಹೆಚ್ಚಾಗಿ, ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಸಿಗುತ್ತದೆ ಎಂದರು.
ಕ್ಷೇತ್ರ ಯೋಜನಾಧಿಕಾರಿ ಎಸ್.ವಸಂತ, ಚಿತ್ರದುರ್ಗ ಪ್ರಾದೇಶಿಕ ಕೆರೆ ಅಭಿವೃದ್ಧಿ ಎಂಜಿನಿಯರ್ ಹರೀಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮೇಶ್, ಸದಸ್ಯರಾದ ಯೋಗರಾಜ್, ಸಾವಿತ್ರಮ್ಮ, ರಂಗಮ್ಮ, ರೈತ ಮುಖಂಡ ರಾಜಪ್ಪ, ಮೋಹನ್, ಚಂದ್ರಪ್ಪ, ಲೋಕೇಶ್, ಸ್ವ ಸಹಾಯ ಮತ್ತು ಪ್ರಗತಿ ಬಂಧು ಸಂಘದ ಸದಸ್ಯರು, ಗ್ರಾಮಸ್ಥರು, ಕೃಷಿ ಮೇಲ್ವಿಚಾರಕರು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.