ಚಿತ್ರದುರ್ಗ: ಕೋವಿಡ್ ಎರಡನೇ ಅಲೆ ಹಾಗೂ ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ 6,435 ರೈತರ ಬ್ಯಾಂಕ್ ಖಾತೆಗೆ ಕೋವಿಡ್ ಪರಿಹಾರ ಯೋಜನೆಯಡಿ ಈವರೆಗೂ ಒಟ್ಟು ₹ 3.43 ಕೋಟಿ ಹಣ ಜಮಾ ಮಾಡಲಾಗಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಬಗೆಯ ಹೂವು ಬೆಳೆಯಲಾಗುತ್ತದೆ. ಸಣ್ಣ, ಅತಿ ಸಣ್ಣ ರೈತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಲಾಕ್ಡೌನ್ನಿಂದಾಗಿ ಪುಷ್ಪ ಬೆಳೆಗಾರರಿಗೆ ಸಮಸ್ಯೆ ಉಂಟಾಗಿತ್ತು. ಹೂವು ಬೆಳೆಗಾರರ ಪೈಕಿ ನಷ್ಟ ಅನುಭವಿಸಿದ 2,925 ಫಲಾನುಭವಿಗಳ ಖಾತೆಗೆ ಈವರೆಗೂ ಒಟ್ಟು ₹ 1.14 ಕೋಟಿ ಪರಿಹಾರ ಜಮಾ ಆಗಿದೆ.
ಮೊಳಕಾಲ್ಮುರು ತಾಲ್ಲೂಕಿನ 241, ಚಳ್ಳಕೆರೆ 789, ಚಿತ್ರದುರ್ಗ 346, ಹೊಳಲ್ಕೆರೆ 149, ಹೊಸದುರ್ಗ 286 ಹಾಗೂ ಹಿರಿಯೂರು ತಾಲ್ಲೂಕಿನ 1,114 ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಆಗಿದೆ.
ಜಿಲ್ಲೆಯಲ್ಲಿ ಕಲ್ಲಂಗಡಿ, ಪಪ್ಪಾಯ, ಕರಬೂಜ, ಅಂಜೂರ ಹಾಗೂ ಇತರ ಬೆಳೆಯನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗಿತ್ತು. ತರಕಾರಿ ಬೆಳೆಗಳಾದ ಟೊಮೊಟೊ, ಈರುಳ್ಳಿ ಸೇರಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯಲಾಗಿತ್ತು. ಹಣ್ಣು ಮತ್ತು ತರಕಾರಿ ಬೆಳೆಗಾರರು ತೊಂದರೆಗೆ ಸಿಲುಕಿದ್ದರು.
ಜಿಲ್ಲೆಯ 595 ಹಣ್ಣು ಬೆಳೆಗಾರರು ಸೇರಿ ಒಟ್ಟು ₹ 45 ಲಕ್ಷ ಪರಿಹಾರದ ರೂಪದಲ್ಲಿ ನೇರವಾಗಿ ಅವರ ಖಾತೆಗೆ ಜಮಾ ಆಗಿದೆ. ತರಕಾರಿ ಪೈಕಿ 2,915 ಬೆಳೆಗಾರರಿಗೆ ಒಟ್ಟು ಈವರೆಗೂ ₹ 1.83 ಕೋಟಿ ಪಾವತಿ ಮಾಡಲಾಗಿದೆ ಎಂದು
ತೋಟಗಾರಿಕೆ ಇಲಾಖೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.