ಹೊಸದುರ್ಗ: ಪಟ್ಟಣದ ಗಣೇಶ ಸದನದಲ್ಲಿ, ಅಶೋಕ ರಂಗಮಂದಿರದ ದುರ್ಗಾದೇವಿ ಮಂಟಪದಲ್ಲಿ ಹಾಗೂ ಟಿ.ಬಿ. ವೃತ್ತದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಅಯೋಧ್ಯೆ ಮಂಟಪ ಸೇರಿ ವಿವಿಧೆಡೆ ಬುಧವಾರ ಧಾರ್ಮಿಕ ವಿಧಿಗಳನ್ವಯ ಗಣೇಶ ಪ್ರಾತಿಷ್ಠಾಪನೆ ಕಾರ್ಯ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಖಾಸಗಿ ಬಸ್ ನಿಲ್ದಾಣದ ಗಣೇಶ ಸದನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮುಗ್ಧತೆಯಿಂದ ಕೂಡಿದೆ. ಗಣಪತಿ ಭಕ್ತ ಮಂಡಳಿ ವತಿಯಿಂದ ದುರ್ಗಾದೇವಿ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ವಿಘ್ನೇಶ್ವರನ ಮೂರ್ತಿ ಅತ್ಯಂತ ವೈಭವಯುತವಾಗಿದ್ದು, ಭಕ್ತರನ್ನು ಸೆಳೆಯುತ್ತಿದೆ. ಅಯೋಧ್ಯೆ ಮಂಟಪದಲ್ಲಿ ಐದು ಹೆಡೆಯ ಸರ್ಪದ ಮೇಲೆ ವಿರಾಜಮಾನವಾಗಿ ಕುಳಿತಿರುವ ಗಣಪನ ಮೂರ್ತಿ ವಿಶಿಷ್ಟವಾಗಿದೆ. ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಗಣಪತಿ ಮೂರ್ತಿಗಳಿಗೆ ನಿತ್ಯ ವಿಶೇಷ ಪೂಜೆ ಮಹಾಮಂಗಳಾರತಿ ನಡೆಯುತ್ತಿದೆ.
ಮೂರೂ ಕಡೆ ನಿತ್ಯ ಸಂಜೆ ಭರತನಾಟ್ಯ, ನೃತ್ಯ, ಹರಿಕಥೆ, ಸಂಗೀತ ಸೇರಿದಂತೆ ಹಲವು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೋಮ ಹವನಗಳನ್ನೂ ಹಮ್ಮಿಕೊಳ್ಳಲಾಗಿದೆ.
ಗಣೇಶೋತ್ಸವದ ಅಂಗವಾಗಿ ಟಿ.ಬಿ. ವೃತ್ತದಿಂದ ಹುಳಿಯಾರು ವೃತ್ತದವರೆಗೂ, ಗಣೇಶ ಸದನದಿಂದ ಪುರಸಭೆ ಮುಂಭಾಗದವರೆಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.