ಚಿತ್ರದುರ್ಗ: ‘ಹೊಳಲ್ಕೆರೆ ತಾಲ್ಲೂಕು ಗಿಲಿಕೇನಹಳ್ಳಿಯ ಅಜ್ಜಯ್ಯ ಸಾವು, ಅಂತರ್ಜಾತಿ ವಿವಾಹ ಸಂಬಂಧ ಪೊಲೀಸರು ನಿಯಮಾನುಸಾರ ಕ್ರಮ ವಹಿಸಿದ್ದಾರೆ. ಬಾಲಕಿಯ ವಯಸ್ಸಿನ ಗೊಂದಲ ಕುರಿತಂತೆ ಬಾಲನ್ಯಾಯ ಕಾಯ್ದೆ ಅನುಸಾರ ಆಕೆಯ ಶಾಲಾ ದಾಖಲಾತಿ ಪರಿಗಣಿಸಲಾಗಿದೆ. ಅಜ್ಜಯ್ಯ ಅವರು ಹಾಜರುಪಡಿಸಿದ್ದ ಜನನ ಪ್ರಮಾಣ ಪತ್ರದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು.
‘2ನೇ ವರ್ಷದ ಬಿಎ ಓದುತ್ತಿದ್ದ ಯುವತಿ ಜುಲೈ 12ರಂದು ಕಾಲೇಜಿನಿಂದ ವಾಪಸ್ ಬಂದಿರಲಿಲ್ಲ. ಜುಲೈ 13ರಂದು ಆಕೆಯ ತಾಯಿ ಪುಷ್ಪಾ ಹೊಳಲ್ಕೆರೆ ಠಾಣೆಗೆ ಹಾಜರಾಗಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ದೂರು ನೀಡುವ ವೇಳೆ ಯುವತಿಗೆ 19 ವರ್ಷವಾಗಿದೆ ಎಂದು ತಿಳಿಸಿದ್ದರು. ಪ್ರಕರಣದ ಬೆನ್ನು ಹತ್ತಿದಾಗ ಯುವತಿ ಯುವಕನೊಬ್ಬನ ಜೊತೆ ಮದುವೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂತು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಜುಲೈ 15ರಂದು ಠಾಣೆಗೆ ಹಾಜರಾದ ಜೋಡಿ ತಾವು ವಯಸ್ಕರಾಗಿದ್ದು, ಇಬ್ಬರೂ ಮದುವೆ ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ದಾಖಲಿಸಿದರು. ಆಧಾರ್ ಕಾರ್ಡ್, ಶಾಲಾ ದಾಖಲಾತಿಗಳ ಅನುಸಾರ ಇಬ್ಬರೂ ಪ್ರಾಪ್ತ ವಯಸ್ಕಾಗಿದ್ದರು. ಇದನ್ನು ಪರಿಗಣಿಸಿ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣವನ್ನು ಅಂತ್ಯಗೊಳಿಸಲಾಯಿತು’ ಎಂದರು.
‘ಬಾಲ ನ್ಯಾಯ ಕಾಯ್ದೆ ಅನುಸಾರ ಯಾವುದೇ ಮಗುವಿನ ವಯಸ್ಸಿನ ಬಗ್ಗೆ ಗೊಂದಲಗಳು ಮೂಡಿದಾಗ ಶಾಲಾ ದಾಖಲಾತಿ, ಎಸ್ಎಸ್ಎಲ್ಸಿ ದಾಖಲಾತಿಯಲ್ಲಿರುವ ಜನ್ಮದಿನಾಂಕವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಅದರಂತೆ ಹೊಳಲ್ಕೆರೆ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ’ ಎಂದು ಹೇಳಿದರು.
‘ಜುಲೈ 18ರಂದು ಠಾಣೆಗೆ ಹಾಜರಾದ ಅಜ್ಜಯ್ಯ ದಾವಣಗೆರೆ ಮಹಾನಗರ ಪಾಲಿಕೆ ವಿತರಣೆ ಮಾಡಿರುವ ಜನನ ಪ್ರಮಾಣ ಪತ್ರ ತಂದು ಮಗಳಿಗೆ 18 ವರ್ಷವಾಗಲು ಇನ್ನೂ 2 ತಿಂಗಳು ಬಾಕಿ ಇದೆ. ಹೀಗಾಗಿ ಬಾಲಕಿಯನ್ನು ವಿವಾಹ ಮಾಡಿಕೊಂಡಿರುವ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅವರ ಮನವಿ ಆಲಿಸಿದ ಪೊಲೀಸರು ಎಸ್ಎಸ್ಎಲ್ಸಿ ದಾಖಲಾತಿ ಅನುಸಾರ ಯುವತಿ ಪ್ರಾಪ್ತ ವಯಸ್ಕರಾಗಿದ್ದಾರೆ ಎಂದು ತಿಳಿಸಿದ್ದಾರೆ’ ಎಂದರು.
‘ಕಾನೂನಾತ್ಮಕವಾಗಿ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರೂ ಅಜ್ಜಯ್ಯ ಅವರು ಪೊಲೀಸ್ ಠಾಣೆ ಎದುರು ವಿಷ ಸೇವನೆ ಮಾಡಿದ್ದಾರೆ. ಜನನ ಪ್ರಮಾಣ ಪತ್ರವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರೂ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ’ ಎಂದರು.
‘ಅಜ್ಜಯ್ಯ ಮೃತದೇಹದ ಅಂತ್ಯಕ್ರಿಯೆಗೆ ತೆರಳುವ ಸಂದರ್ಭದಲ್ಲಿ ಕೆಲವರು ಅವರ ಕುಟುಂಬ ಸದಸ್ಯರಿಗೆ ಪ್ರಚೋದನೆ ನೀಡಿ ಪೊಲೀಸ್ ಠಾಣೆ ಕಡೆಗೆ ಮೃತದೇಹ ತಂದು, ಪ್ರತಿಭಟನೆ ನಡೆಸಿದ್ದಾರೆ. ನಾನು ಕೂಡ ಸ್ಥಳಕ್ಕೆ ತೆರಳಿ ಘಟನೆಯ ವಿವರ ಪಡೆದುಕೊಂಡಿದ್ದೇನೆ. ಈಗಲೂ ಘಟನೆಯ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಜನನ ಪ್ರಮಾಣ ಪತ್ರ ಪರಿಶೀಲನೆಗಾಗಿ ಯುವತಿ ಜನಿಸಿದ ಆಸ್ಪತ್ರೆ ವಿವರಗಳನ್ನೂ ಪಡೆಯಲಾಗುತ್ತಿದೆ. ಪೊಲೀಸರಿಂದ ತಪ್ಪುಗಳಾಗಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.
ಡಿವೈಎಸ್ಪಿ ಬ್ಯಾಡ್ಜ್ ಕಿತ್ತ ಜನ
‘ಮೃತದೇಹ ಇಟ್ಟುಕೊಂಡು ರಸ್ತೆ ತಡೆ ನಡೆಸುವ ವೇಳೆ ಕೆಲವರು ಪೊಲೀಸರ ವಿರುದ್ಧ ತಳ್ಳಾಟ ನೂಕಾಟ ನಡೆಸಿದ್ದಾರೆ. ಈ ವೇಳೆ ಡಿವೈಎಸ್ಪಿ ಅವರ ಬ್ಯಾಡ್ಜ್ ಕಿತ್ತು ಹಾಕಿದ್ದಾರೆ. ಹೀಗಾಗಿ ಪ್ರತಿಭಟನಕಾರರ ಮೇಲೆ ಲಘು ಲಾಠಿಪ್ರಹಾರ ಮಾಡಲಾಗಿದೆ’ ಎಂದು ರಂಜಿತ್ ಕುಮಾರ್ ಬಂಡಾರು ತಿಳಿಸಿದರು. ‘ಪ್ರತಿಭಟನೆ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಪ್ಪಿಸಲು ಲಾಠಿ ಪ್ರಹಾರ ನಡೆಸಲಾಯಿತು. ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸುವ ಉದ್ದೇಶ ನಮಗೆ ಇರಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.