ಚಳ್ಳಕೆರೆ: ತಾಲ್ಲೂಕಿನ ದೊಡ್ಡೇರಿ ಗ್ರಾಮದ ನಿವೃತ್ತ ಉಪನ್ಯಾಸಕ ಡಿ.ಎಸ್. ರಾಜಣ್ಣರ ಅವರ ಜಮೀನಿನಲ್ಲಿ ಪಾಳೇಗಾರರ ಕಾಲದ ಕಬ್ಬಿಣದ ಸೌಟು ಹಾಗೂ ನೂತನ ಶಿಲಾಯುಧ (ಕಲ್ಲಿನ ಕೊಡಲಿ) ದೊರೆತಿವೆ ಎಂದು ಇತಿಹಾಸ ಸಂಶೋಧಕ ಮಹೇಶ್ ಕುಂಚಿಗನಾಳು ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಗೈತಿಹಾಸ ಕಾಲದ ಆಯುಧವಾಗಿದ್ದು, ಅದಿಮಾನವ ಬದುಕಿನ ಕೊನೆ ಹಂತವಾದ ನವಶಿಲಾಯುಗದ (ನಿಯೋಲಿಥಿಕ್) ಕಾಲಕ್ಕೆ ಸೇರಿದೆ. ಕ್ರಿ.ಪೂ 4,500 ವರ್ಷದ ಹಿಂದೆಯೇ ಜನರು ಕಲ್ಲಿನ ಕೈ ಕೊಡಲಿ ಬಳಸುತ್ತಿದ್ದರು. ಹೀಗಾಗಿ ದೊಡ್ಡೇರಿ ಆ ಕಾಲಕ್ಕಾಗಲೆ ಪ್ರಾಗೈತಿಹಾಸಿಕ ನೆಲೆಯಾಗಿರುವುದರ ಜೊತೆಗೆ ಸೇನಾ ತಾಣವೂ ಆಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಸಿರಾದ ನವಾಬರು, ಮರಾಠರು ಮತ್ತು ಚಿತ್ರದುರ್ಗ ಪಾಳೇಗಾರರ ಕಾಲದಲ್ಲಿ ಬಳಸುತ್ತಿದ್ದ 30 ಸೆ.ಮೀ ಉದ್ದ, 650 ಗ್ರಾಂ. ತೂಕದ ಕಬ್ಬಿಣದ ಸೌಟು ದೊಡ್ಡೇರಿ ಕೇಂದ್ರದಲ್ಲಿ ದೊರೆತಿದೆ ಎಂದು ಡಿ.ಎಸ್.ರಾಜಣ್ಣ ಹಾಗೂ ಸಂಶೋಧಕ ಮಹೇಶ್ ಕುಂಚಿಗನಾಳು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.