ಪರಶುರಾಂಪುರ: ಬರಡು ಭೂಮಿ ಕೃಷಿ ಮಾಡಲು ಯೋಗ್ಯವಿಲ್ಲ. ಎನು ಮಾಡುವುದು ಎಂಬ ಚಿಂತೆಯಲ್ಲಿದ್ದ ರೈತ ಕೊನೆಗೂ ನೇರಳೆ ಗಿಡ ತಂದು ನಾಟಿ ಮಾಡಿದರು. ಅದು ಇಂದು ದೊಡ್ಡ ಮಟ್ಟದಲ್ಲಿ ಲಾಭ ತಂದು ಕೊಡುತ್ತಿದೆ ಎಂದು ಖುಷಿ ಪಡುತ್ತಿದ್ದಾರೆ.
ಇದು ಪರಶುರಾಂಪುರ ಹೋಬಳಿಯ ಪಿ.ಮಹದೇವಪುರದ ರೈತ ದಂಪತಿ ಲತಾ, ಜಯಸಿಂಹ ರೆಡ್ಡಿ ಅವರ ಕಥೆ. ಓದಿದ್ದು
ಬಿ.ಕಾಂ, ವಯಸ್ಸು 50 ಆದರೂ ಕೃಷಿ ಕ್ಷೇತ್ರದಲ್ಲಿ 18 ವರ್ಷದ ಯುವಕರಿಗೆ ಇರುವ ಉತ್ಸಾಹ ಇದೆ.
ಐದು ವರ್ಷಗಳ ಹಿಂದೆ ನಾಟಿ ಮಾಡಿದ ನೇರಳೆ ಗಿಡಗಳು ಇಂದು ಫಸಲಿಗೆ
ಬಂದಿದ್ದು, ಪ್ರತಿ ದಿನ 40ರಿಂದ 50 ಕೆ.ಜಿಯವರೆಗೂ ಹಣ್ಣು ಸಿಗುತ್ತಿದೆ. 1 ಕೆ.ಜಿಗೆ
₹ 100ರಂತೆ ₹ 4,000ದಿಂದ
₹ 5,000ರವರೆಗೂ ಸಿಗುತ್ತಿದೆ ಎನ್ನುತ್ತಾರೆ ರೈತ ಜಯಸಿಂಹ ರೆಡ್ಡಿ.
ನೇರಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ: ನಮ್ಮ ಗ್ರಾಮದ ಸುತ್ತ ಮುತ್ತ ಇರುವ ಪರಶುರಾಂಪುರ, ಲಿಂಗದಹಲ್ಲಿ ಅಮರಾಪುರ ಹಾಗೂ ಬೆಂಗಳೂರಿನಿಂದಲೂ ಬೇಡಿಕೆ ಬರುತ್ತಿದೆ. ಸಕ್ಕರೆ ಕಾಯಿಲೆಗೆ ರಾಮಬಾಣ ಎಂದು ಜನರು ಈ ಹಣ್ಣನ್ನು ಹೆಚ್ಚು ಕೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ
₹ 150ದಿಂದ ₹ 200ಕ್ಕೆ ಮಾರಾಟ ಮಾಡುತ್ತಾರೆ. ಆದರೆ, ನಾವು 1 ಕೆ.ಜಿಗೆ
₹ 100ರಂತೆ ಕೊಡುತ್ತೇವೆ. ಇದರ ಜೊತೆಗೆ ಓಣಗಿಸಿದ ನೇರಳೆ ಹಣ್ಣಿಗೂ ಬೇಡಿಕೆ ಹೆಚ್ಚಿದೆ. ಕೆ.ಜಿಗೆ ₹ 400ಕ್ಕೆ ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ ಅವರು.
ನೇರಳೆ ಬೆಳೆಗೆ ಖರ್ಚು ಕಡಿಮೆ ಆದಾಯ ನಿರಂತರ: ‘ನೇರಳೆ ಗಿಡ ಒಂದು ಬಾರಿ ನಾಟಿ ಮಾಡಿ ಹನಿ ನೀರಾವರಿ ಅಳವಡಿಸಿದರೆ ಸಾಕು. ಇದಕ್ಕೆ ಔಷಧ, ಗೊಬ್ಬರ ಬೇಡ. ನಾಲ್ಕು ವರ್ಷ ಆರೈಕೆ ಮಾಡಿದರೆ ಸಾಕು. 35–40 ವರ್ಷಗಳ ಕಾಲ ನಿರಂತರವಾಗಿ ಆದಾಯ ಪಡೆಯಬಹುದು’ ಎಂಬುದು ರೈತ ಜಯಸಿಂಹ ರೆಡ್ಡಿ ಅವರ ಅಭಿಪ್ರಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.