ADVERTISEMENT

ಓದು ಬಲ್ಲವರು ಮಾತ್ರ ಸಾಹಿತಿಗಳಲ್ಲ

‘ರಾಷ್ಟ್ರೀಯ ನಾಟಕೋತ್ಸವ’ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 6:04 IST
Last Updated 7 ನವೆಂಬರ್ 2022, 6:04 IST
ಹೊಸದುರ್ಗದ ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸಪೂಜಾರಿ ಮಾತನಾಡಿದರು.
ಹೊಸದುರ್ಗದ ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸಪೂಜಾರಿ ಮಾತನಾಡಿದರು.   

ಹೊಸದುರ್ಗ: ಜಾನಪದ ಸಾಹಿತ್ಯವನ್ನು ಕೇಳಿಸಿಕೊಂಡ ವಿದ್ಯಾವಂತರು ಅವುಗಳನ್ನು ದಾಖಲಿಸಿ ಪದವಿ ಪಡೆದುಕೊಳ್ಳುತ್ತಿದ್ದಾರೆ. ಓದು ಬರಹ ಬಲ್ಲವರು ಬರೆದಿದ್ದು ಮಾತ್ರ ಸಾಹಿತ್ಯವಲ್ಲ. ಅನುಭಾವದ ನುಡಿಗಳನ್ನು ಹಂಚಿಕೊಳ್ಳುವವರೆಲ್ಲರೂ ಸಾಹಿತಿಗಳೇ. ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಾಣೇಹಳ್ಳಿಯ ಬಯಲು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ರಾಷ್ಟ್ರೀಯ ನಾಟಕೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವ ಮನೆಯಲ್ಲಿ ತಾಯಿ ಸುಸಂಸ್ಕೃತವಾಗಿರುವಳೋ ಆ ಮನೆ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಆಕೆ ಸಮಾಜದ ಜ್ಯೋತಿ, ಕಣ್ಣು ಹಾಗೂ ನಾಡಿನ ಬೆಳಕಾಗುವಳು. ಸಮಾಜದ ಹಿತಕ್ಕಾಗಿ ತನ್ನನ್ನು ತಾನು ಗಂಧದಂತೆ ತೇಯ್ದುಕೊಳ್ಳುವವರೆಲ್ಲರೂ ತಾಯಂದಿರೇ ಎಂದರು.

ADVERTISEMENT

‘ಬುದ್ಧಿವಂತರನ್ನು ಬುದ್ಧಿವಂತ ರಾಗಿಸುವುದಕ್ಕಿಂತ, ದಡ್ಡರನ್ನು ಬುದ್ಧಿವಂತರಾಗಿಸುವುದು ದೊಡ್ಡದು. ನಮ್ಮ ಸುತ್ತಮುತ್ತ ನಾಡಿಗೆ ಬೆಳಕು ನೀಡುತ್ತಿರುವ ಅನೇಕ ಚೇತನಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮದಾಗಬೇಕು’ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಭಾರತದ ಪ್ರಜೆಯಾಗಿ ನಾನು ದೇಶಕ್ಕೆ ಏನು ಕೊಡಬಲ್ಲೆ ಎನ್ನುವ ಸ್ವ
ಅವಲೋಕನ ಮಾಡಿಕೊಳ್ಳುವ ನಾಗರಿಕ ಸಮಾಜ ಸೃಷ್ಟಿಯಾಗಲಿ ಎಂದರು.

‘ಮಹಿಳೆ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.‌ ಪುಷ್ಪ, ‘ಶರಣ ಸಂಸ್ಕೃತಿಯನ್ನು ಜನಸಾಮಾನ್ಯರ ಮಧ್ಯೆ ತೆಗೆದುಕೊಂಡು ಹೋಗುವ ಮತ್ತೆ ಕಲ್ಯಾಣ ಕಾರ್ಯಕ್ರಮ ಅಪೂರ್ವವಾದುದು.
ಸಂಸ್ಕೃತಿಯ ತೊಟ್ಟಿಲನ್ನು ತೂಗುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಮಹಿಳೆ ಕುಟ್ಟುವಾಗ, ಬೀಸುವಾಗ, ಕಳೆ ತೆಗೆಯುವಾಗ, ಮದುವೆ ಮುಂತಾದ ಸಮಾರಂಭಗಳಲ್ಲಿ ಹೇಳುವ ಜಾನಪದ ಗೀತೆಗಳೇ ಎಲ್ಲಾ ಸಾಹಿತ್ಯಕ್ಕೂ ಮೂಲ. ಜನಪದ ಪರಂಪರೆ ಎಲ್ಲಾ ಸಾಹಿತ್ಯದ ತಾಯಿಬೇರು’ ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ‘ಕಣ್ಣಿಗೆ ಕಾಣದ ದೇವರು, ಜಾತಿ ಧರ್ಮಗಳನ್ನು ಮುಂದಿಟ್ಟುಕೊಂಡು ಜನರು ಹೊಡೆದಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ. ಸಮಾಜ ಮತ್ತು ದೇಶ ಸದೃಢವಾಗಲು ಶರಣರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ’ ಎಂದರು.

ಸಾರಿಗೆ ಆಯುಕ್ತ ಸಿದ್ದರಾಮಪ್ಪ ಮಾತನಾಡಿ, ‘ರಂಗಭೂಮಿ ಹುಟ್ಟಿದ್ದು ಯೂರೋಪಿನಲ್ಲಿಯಾದರೂ ಅವುಗಳನ್ನೂ ಮೀರಿಸುವಂತೆ ಸಾಣೇಹಳ್ಳಿಯಲ್ಲಿ ರಂಗಮಂದಿರಗಳು ತಲೆ ಎತ್ತಿವೆ. ರಂಗ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ’ ಎಂದರು.

ಇದೇ ವೇಳೆ ದಾವಣಗೆರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪಯೋಜನಾ ಸಮನ್ವಯಾಧಿಕಾರಿ ಪುಷ್ಪಲತಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್‌. ಚಂದ್ರಶೇಖರ್‌, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜೆ. ಎಸ್‌ ಷಣ್ಮುಖಪ್ಪ ಅವರನ್ನು ಅಭಿನಂಧಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಮಾಲತೇಶ ಬಡಿಗೇರ್‌ ನಿರ್ದೇಶನದ ‘ಮೇಘದೂತ ದರ್ಶನಂ’ ನಾಟಕ ಪ್ರದರ್ಶನಗೊಂಡಿತು.

ರಾಜಕೀಯ ಮುಖಂಡ ಎಸ್. ಲಿಂಗಮೂರ್ತಿ, ಲೇಖಕ ಡಿ.ಒ. ಸದಾಶಿವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.