ಹೊಳಲ್ಕೆರೆ: ತಾಲ್ಲೂಕಿನ ಬಸಾಪುರ ಗೇಟ್ ಬಳಿ ಕೆಎಸ್ಆರ್ಟಿಸಿ ಬಸ್ ಡಿಪೊ ನಿರ್ಮಾಣ ಕಾಮಗಾರಿ ಶೇ 90ರಷ್ಟು ಮುಗಿದು ವರ್ಷ ಕಳೆದಿದೆ. ಇನ್ನೂ ಶೇ 10ರಷ್ಟು ಕಾಮಗಾರಿ ಬಾಕಿ ಇರುವುದರಿಂದ ಉದ್ಘಾಟನೆಯಾಗಿಲ್ಲ.
‘ಅಂದಾಜು ₹ 8 ಕೋಟಿ ವೆಚ್ಚದಲ್ಲಿ ಡಿಪೊ ನಿರ್ಮಿಸಲಾಗುತ್ತಿದೆ. ಬಸ್ ನಿಲುಗಡೆ ಅಂಕಣ, ಆಡಳಿತ ಕಚೇರಿ, ಕಾರ್ಯಾಗಾರ ಘಟಕ, ವಿಶ್ರಾಂತಿ ಗೃಹ, ಭದ್ರತಾ ಕೊಠಡಿ, ಚಾಲಕಿಯರು ಹಾಗೂ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಗೃಹ, ಜನರೇಟರ್ ಕೊಠಡಿ, ಇಂಧನ ಕೊಠಡಿ, ಬಸ್ ಸ್ವಚ್ಛತೆ ವಿಭಾಗ, ಶೌಚಾಲಯ ಮತ್ತಿತರ ಕಾಮಗಾರಿ ಕಾರ್ಯ ಮುಗಿದಿದೆ’ ಎಂದು ಎಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ.
‘ಡಿಪೋದಲ್ಲಿ ಡೀಸೆಲ್ ಬಂಕ್ ಅಳವಡಿಸುವ ಕಾಮಗಾರಿ ನಡೆಯದ ಕಾರಣ ಉದ್ಘಾಟನೆ ವಿಳಂಬವಾಗುತ್ತಿದೆ. ಈಗ ಬಂಕ್ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು, ಶೀಘ್ರದಲ್ಲೇ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಯವರು ಬಂಕ್ ಅಳವಡಿಸಲಿದ್ದಾರೆ’ ಎಂದು ಕೆಎಸ್ಆರ್ಟಿಸಿಯ ಡಿ.ಸಿ. ವೆಂಕಟೇಶ್ ತಿಳಿಸಿದ್ದಾರೆ.
ಗ್ರಾಮೀಣ ಸಾರಿಗೆ ಸುಧಾರಣೆ
‘ಡಿಪೊ ಕಾರ್ಯಾರಂಭ ಮಾಡಿದರೆ ತಾಲ್ಲೂಕಿನ ಗ್ರಾಮೀಣ ಸಾರಿಗೆ ವ್ಯವಸ್ಥೆ ಸುಧಾರಿಸಲಿದೆ. ಡಿಪೊಗೆ ಕನಿಷ್ಠ 30 ಬಸ್ ಮೀಸಲಿಡಲಾಗಿದ್ದು, ಇಲ್ಲಿಂದಲೇ ಗ್ರಾಮೀಣ ಸಾರಿಗೆ ಆರಂಭಿಸಬಹುದು. ಇದರಿಂದ ರೈತರು, ಗ್ರಾಮೀಣ ವಿದ್ಯಾರ್ಥಿಗಳು, ಕೂಲಿಕಾರರಿಗೆ ಅನುಕೂಲ ಆಗಲಿದೆ. ಇಲ್ಲಿಂದ ಧರ್ಮಸ್ಥಳ, ಮಂತ್ರಾಲಯ, ತಿರುಪತಿ ಸೇರಿದಂತೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಬಸ್ ಸಂಪರ್ಕ ಸಿಗಲಿದೆ. ಡಿಪೊದಲ್ಲೇ ರಾತ್ರಿ ನಿಲುಗಡೆ ವ್ಯವಸ್ಥೆ ಆಗಲಿದ್ದು, ರಾತ್ರಿ ಹಾಗೂ ಬೆಳಿಗ್ಗೆ ಸಂಚಾರ ಇಲ್ಲಿಂದಲೇ ಆರಂಭವಾಗಲಿದೆ. ಇಲ್ಲಿಯೇ ಬಸ್ ಪಾಸ್ ವಿತರಣೆ ಮಾಡುವುದರಿಂದ ವಿದ್ಯಾರ್ಥಿಗಳಿಗೂ ಅನುಕೂಲ ಆಗಲಿದೆ. ಇಲ್ಲಿ ಉದ್ಯೋಗಾವಕಾಶವೂ ಸಿಗಲಿದೆ’ ಎಂದು ಕೆಎಸ್ಆರ್ಟಿಸಿ ನಿವೃತ್ತ ನೌಕರ ಆರ್.ರಾಜಪ್ಪ ಹೇಳುತ್ತಾರೆ.
ಡಿಪೊ ಚಿತ್ರದುರ್ಗ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ಇದೇ ಮಾರ್ಗದಲ್ಲಿ ನಿತ್ಯ 50 ಕೆಎಸ್ಆರ್ಟಿಸಿ ಬಸ್ಗಳು ದಿನಕ್ಕೆ ನಾಲ್ಕು ಟ್ರಿಪ್ ಸಂಚರಿಸುತ್ತವೆ. ದಾವಣಗೆರೆ- ಹೊಸದುರ್ಗ ಮಾರ್ಗದಲ್ಲಿಯೂ ಹೆಚ್ಚು ಬಸ್ಗಳು ಸಂಚರಿಸುತ್ತವೆ. ಇಲ್ಲಿ ಡಿಪೊ ಆರಂಭಗೊಂಡರೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
ಈ ಹಿಂದೆ ಕೆಎಸ್ಆರ್ಟಿಸಿ ಅಧ್ಯಕ್ಷನಾಗಿದ್ದಾಗ ಡಿಪೊ ಮಂಜೂರು ಮಾಡಿದ್ದೆ. ಈಗ ಕಾಮಗಾರಿ ಅಂತಿಮ ಹಂತದಲ್ಲಿದ್ದು ಡೀಸೆಲ್ ಬಂಕ್ ನಿರ್ಮಿಸಿದ ತಕ್ಷಣ ಲೋಕಾರ್ಪಣೆ ಮಾಡಲಾಗುವುದು. ಡಿಪೊ ಎದುರಿಗೆ ನೌಕರರಿಗಾಗಿ ವಸತಿಗೃಹವನ್ನೂ ನಿರ್ಮಿಸಲಾಗಿದೆ.– ಎಂ.ಚಂದ್ರಪ್ಪ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.