ಚಿತ್ರದುರ್ಗ: ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಾರಿಗೆ ಘಟಕ ನಿರ್ಮಿಸಬೇಕು ಎಂದು ಕೋರಿ ಭಾರತೀಯ ಮಜ್ದೂರ್ ಸಂಘ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿತ್ರದುರ್ಗ ವಿಭಾಗದ ನೌಕರರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ.ಚಂದ್ರಪ್ಪ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ಘಟಕ ನಿರ್ಮಿಸಿದಲ್ಲಿ ಗ್ರಾಮಾಂತರ ಪ್ರಯಾಣಿಕರ ತೊಂದರೆ ನಿವಾರಣೆಯಾಗುತ್ತದೆ. ವಿಭಾಗಕ್ಕೂ ಹೆಚ್ಚಿನ ಅದಾಯ ಬರುವ ನಿರೀಕ್ಷೆ ಇದೆ. ಈ ಕುರಿತು ಗಮನಹರಿಸಬೇಕು ಎಂದು ಸಿಬ್ಬಂದಿ ಒತ್ತಾಯಿಸಿದರು.
ಚಿತ್ರದುರ್ಗ ನಗರ ಬೆಳೆಯುತ್ತಿದ್ದು, ಈಗಿರುವ ಬಸ್ ನಿಲ್ದಾಣ ಅತ್ಯಂತ ಚಿಕ್ಕದಾಗಿದೆ. ಇದರಿಂದ ಪ್ರಯಾಣಕರಿಗೆ ಹಾಗೂ ವಾಹನ ಚಾಲಕರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಆದ್ದರಿಂದ ಈಗಿರುವ ಘಟಕದ ಹತ್ತಿರ 7 ಎಕರೆ, 7 ಗುಂಟೆ ಜಮೀನಿನಲ್ಲಿ ಅತ್ಯಾಧುನಿಕವಾಗಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟರು.
ನಗರದಲ್ಲಿ ಈಗಾಗಲೇ ನಗರ ಸಾರಿಗೆ ಬಸ್ಗಳು ಸಂಚಾರ ನಡೆಸುತ್ತಿವೆ. ಆದರೆ, ನಗರ ಸಾರಿಗೆ ಬಸ್ ನಿಲ್ದಾಣಗಳೇ ಇಲ್ಲದೇ ಪ್ರಯಾಣಿಕರು ಮತ್ತು ಚಾಲಕ ನಿರ್ವಾಹಕರಿಗೆ ನಿತ್ಯ ತೊಂದರೆಯಾಗುತ್ತಿದೆ. ಇಲ್ಲಿನ ಘಟಕದ ಆವರಣವೂ ಮಣ್ಣಿನಿಂದ ಕೂಡಿದ್ದು, ನಿತ್ಯ ಕರ್ತವ್ಯನಿರ್ವಹಿಸುವ ನೌಕರರು ದೂಳಿನಿಂದ ಅನೇಕ ಕಾಯಿಲೆಗಳಿಗೆ ಈಡಾಗುತ್ತಿದ್ದಾರೆ. ತ್ವರಿತವಾಗಿ ಆವರಣಕ್ಕೆ ಸಿಮೆಂಟ್ ಕಾಂಕ್ರೀಟ್ ಮಾಡಿಸಬೇಕು. ನಗರ ಸಾರಿಗೆಗೆ ಪ್ರತ್ಯೇಕ ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.