ಹೊಸದುರ್ಗ: ‘ಉತ್ತಮ ಶಿಕ್ಷಣ ಪಡೆದು ದುಡಿಮೆಯ ಸಲುವಾಗಿ ವಿದೇಶಕ್ಕೆ ತೆರಳುವ ಮಕ್ಕಳು ತಮ್ಮ ಹೆತ್ತವರನ್ನು ಮರೆಯಬಾರದು. ಹಣದ ವ್ಯಾಮೋಹ ಅಹಂಕಾರ ಬೆಳೆಸಿದರೆ, ಆಧ್ಯಾತ್ಮಿಕ ಭಾವನೆ ಒಳ್ಳೆಯ ಗುಣ ಕಲಿಸುತ್ತದೆ’ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿದರು.
ತಾಲ್ಲೂಕಿನ ಬಾಗೂರಿನ ವಿದ್ಯಾ ವಾಹಿನಿ ವಿದ್ಯಾನಿಕೇತನ ಶಾಲೆಯಲ್ಲಿ ಶುಕ್ರವಾರ ನಡೆದ ಪಾದಪೂಜೆ ಹಾಗೂ ಅಕ್ಷರಾಭ್ಯಾಸ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿ ವಿದ್ಯೆ ಗಳಿಸುವುದು ಸಾಧನೆಯಲ್ಲ. ಉತ್ತಮ ಸಂಸ್ಕಾರ, ಸನ್ಮಾರ್ಗದಲ್ಲಿ ಜೀವನ ಸಾಗಿಸುವುದು, ನಾಡಿನ ಸತ್ಪ್ರಜೆಯಾದಾಗ ಮಾತ್ರ ಶಿಕ್ಷಣ ಪಡೆದಿದ್ದು ಸಾರ್ಥಕವಾಗುತ್ತದೆ. ಈಗಿನ ತಾಂತ್ರಿಕ ಯುಗದಲ್ಲಿ ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿರಿಸಿ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಪೋಷಕರ ಪಾತ್ರ ಬಹಳಷ್ಟು ಇದೆ’ ಎಂದು ಹೇಳಿದರು.
‘ಮಕ್ಕಳ ಹೃದಯದಲ್ಲಿ ಪೋಷಕರು ಏನನ್ನು ಬಿತ್ತುತ್ತಾರೋ, ಮನೆಯಲ್ಲಿ ಯಾವ ವಾತಾವರಣ ಇರುತ್ತದೆಯೋ ಅವರ ಮುಂದಿನ ಭವಿಷ್ಯ ಅದೇ ದಿಕ್ಕಿನಲ್ಲಿ ನಡೆಯಲು ಸಾಧ್ಯ. ಹಾಗಾಗಿ ಮಕ್ಕಳಿಗಿಂತ ಹೆಚ್ಚು ಜಾಗೃತಿಯನ್ನು ಪೋಷಕರು ವಹಿಸಿ ಅವರಿಗೆ ಆದರ್ಶರಾಗಬೇಕು’ ಎಂದು ಕಿವಿಮಾತು ಹೇಳಿದರು.
ಪಾದಪೂಜೆ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಅರ್ಚಕರಾದ ಶ್ರೀವತ್ಸ ಭಟ್ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಬಿ.ಜೆ. ರಂಗನಾಥ್, ಸಂಸ್ಥೆಯ ನಿರ್ದೇಶಕರಾದ ಪಾಂಡುರಂಗ, ಕುಮಾರ್, ರಂಗನಾಥ್, ಮಂಜುನಾಥ್, ರಮೇಶ್, ಮುಖ್ಯಶಿಕ್ಷಕ ಮಂಜುನಾಥ್, ಕೇಶವಮೂರ್ತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.