ಚಿತ್ರದುರ್ಗ: ರಾಜ್ಯದಲ್ಲಿರುವ ಬಗರ್ಹುಕುಂ ಸಾಗುವಳಿದಾರರ ಜೀವನದ ಜತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಕೂಡಲೇ ಕಾನೂನು ತೊಡಕು ನಿವಾರಿಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹೋರಾಟ ಸಮಿತಿ ಸೋಮವಾರ ಪ್ರತಿಭಟನೆ ನಡೆಸಿತು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಸಮಸ್ಯೆ ಬಗೆಹರಿಸಿ ಭೂಮಿ ಮಂಜೂರಾತಿ ನೀಡಿ ಎಂದು ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಭೂಮಿ–ವಸತಿಗಾಗಿ ಹೋರಾಟ ನಡೆಸಲಾಗುತ್ತಿದೆ. ಆದರೂ ಬಡ ಜನರ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಿಲ್ಲ. ಫಾರಂ ನಂ.50, 53 ಮತ್ತು 57 ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು. ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಕುಟುಂಬಗಳಿಗೆ ಭೂಮಿ ಮಂಜೂರಾತಿ ನೀಡಬೇಕು. ಜತೆಗೆ ಸಾಗುವಳಿ ಮಾಡುತ್ತಿರುವ ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ತಿರಸ್ಕೃತಗೊಳಿಸಬಾರದು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸರ್ಕಾರಿ ಕಂದಾಯ ಭೂಮಿ, ಗೋಮಾಳ, ಖರಾಬು ಸೇರಿ ಲಕ್ಷಾಂತರ ಎಕರೆ ಭೂಮಿಯಲ್ಲಿ ಕುಟುಂಬಗಳು ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಿವೆ. ಈ ಭೂಮಿ ಹಕ್ಕಿಗಾಗಿ ದಶಕಗಳಿಂದ ಅರ್ಜಿ ಸಲ್ಲಿಸಿ ಹಕ್ಕಿಗಾಗಿ ಕಾಯುತ್ತಿದ್ದಾರೆ. ಆದರೆ, ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಬಾರದು. ಅರಣ್ಯ– ಕಂದಾಯ ಇಲಾಖೆ ನಡುವಿನ ಗೊಂದಲಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಸಾಗುವಳಿದಾರರಿಗೆ ‘ಒನ್ ಟೈಮ್ ಸೆಟಲ್ಮೆಂಟ್’ ಮೂಲಕ ಭೂಮಿ ಹಕ್ಕು ಮಾನ್ಯಗೊಳಿಸಬೇಕು. ವಸತಿರಹಿತರಿಗೆ ರಾಜ್ಯವ್ಯಾಪಿ ಸಮಗ್ರ ಮೆಗಾ ವಸತಿ ಯೋಜನೆ ಘೋಷಿಸುವ ಜತೆಗೆ ಅರಣ್ಯ ಕಾಯ್ದೆಯಡಿ ಅರಣ್ಯವಾಸಿಗಳಿಗೂ ನ್ಯಾಯಬದ್ಧ ಹಕ್ಕು ದೊರಕಬೇಕು ಎಂದು ಒತ್ತಾಯಿಸಿದರು.
‘ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನ್ನದಾತನಿಗೆ ಸೌಲಭ್ಯ ಕಲ್ಪಿಸುವಲ್ಲಿ ಸೋತಿವೆ. ರೈತರಿಗೆ ಭೂಮಿ ಜನ್ಮಸಿದ್ದ ಹಕ್ಕು. ಯಾವುದೇ ಕಾರಣಕ್ಕೂ ಅಕ್ರಮ ಎನ್ನುವ ಪದ ಬಳಸುವಂತಿಲ್ಲ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಲು ಸರ್ಕಾರಗಳಿಗೆ ಆಗುತ್ತಿಲ್ಲ’ ಎಂದು ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರ ಕಾನೂನು ಬದಿಗಿಟ್ಟು ಸಾಮಾಜಿಕ ಹಿತದೃಷ್ಟಿಯಿಂದ ಸಮಸ್ಯೆ ಬಗೆಹರಿಸಬೇಕೆ ವಿನಃ ಎಲ್ಲದಕ್ಕೂ ಕಾನೂನು ತೊಡಕುಗಳನ್ನು ಮುಂದಿಟ್ಟುಕೊಂಡು ಭೂಮಿ ಸಾಗುವಳಿದಾರರಿಗೆ ಅನ್ಯಾಯ ಮಾಡಬಾರದು. ಗೊಂದಲ್ಲದಲ್ಲಿರುವ ಅರಣ್ಯ-ಕಂದಾಯ ಇಲಾಖೆ ಭೂಮಿಗಳ ಜಂಟಿ ಸರ್ವೆ ನಡೆಸಿ ಭೂ ಮಂಜೂರಾತಿಗೆ ಅಡ್ಡಿಯಾಗಿರುವ ಕಾನೂನು ತಿದ್ದುಪಡಿ ಮಾಡಬೇಕು’ ಎಂದು ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಆಗ್ರಹಿಸಿದರು.
ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಮುಖಂಡರಾದ ಹನುಮಂತಪ್ಪ, ನಾಗರಾಜಪ್ಪ, ರಾಜಪ್ಪ, ಅಂಜನಪ್ಪ, ಮಂಜಣ್ಣ, ಲಕ್ಷ್ಮಿದೇವಿ, ಪ್ರವೀಣ, ಜ್ಯೋತಿ, ತಿಮ್ಮಯ್ಯ, ಕರಿಯಮ್ಮ, ಶಿವಮೂರ್ತಿ, ತಿಪ್ಪೇಶ, ಮನ್ಸೂರ್, ಕಾಂತರಾಜ್, ರಾಮಚಂದ್ರ, ಭ್ರಷ್ಟಾಚಾರ ವಿರೋಧಿ ಆಂದೋಲನ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ದುರ್ಗ ಇದ್ದರು.
ಸರ್ಕಾರಕ್ಕೆ ಇಚ್ಚಾಶಕ್ತಿಯಿಲ್ಲದ ಕಾರಣ ಸಾಗುವಳಿದಾರರಿಗೆ ಹಕ್ಕುಪತ್ರ ಸಿಕ್ಕಿಲ್ಲ. ರಾಜ್ಯದಲ್ಲಿ 45 ಲಕ್ಷ ಬಗರ್ಹುಕುಂ ಸಾಗುವಳಿದಾರರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು ಕೇವಲ 14 ಲಕ್ಷ ಸಾಗುವಳಿ ಪತ್ರಕ್ಕೆ ಅನುಮೋದನೆ ನೀಡಲಾಗಿದೆಜೆ.ಯಾದವರೆಡ್ಡಿ ಅಧ್ಯಕ್ಷ ಸ್ವರಾಜ್ ಇಂಡಿಯಾ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.