ಚಿಕ್ಕಜಾಜೂರು: ಇಲ್ಲಿನ ತೋಟವೊಂದರಲ್ಲಿ ಭಾನುವಾರ ಮಧ್ಯಾಹ್ನ ಚಿರತೆ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ಕಡೂರು ರಸ್ತೆಯ ತೋಟವೊಂದರಲ್ಲಿ ರೈತರು ಕೆಲಸ ಮಾಡುತ್ತಿದ್ದಾಗ, ಕೃಷಿ ಹೊಂಡದ ದಡದಲ್ಲಿ ಹಾಕಲಾಗಿದ್ದ ತಾಡಪಾಲಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ರೈತರು ವಲಯ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದರು.
ಉಪ ವಲಯ ಅರಣ್ಯಾಧಿಕಾರಿ ಇದಾಯತ್ ಸಿಬ್ಬಂದಿಯೊಂದಿಗೆ ಬರುವ ವೇಳೆಗೆ ಚಿರತೆ ಅಲ್ಲಿಂದ
ಹೋಗಿತ್ತು.
ರೈತರು ಮೊಬೈಲ್ನಲ್ಲಿ ಚಿರತೆ ಫೋಟೋ ತೆಗೆದಿದ್ದಾರೆ. ಚಿತ್ರವನ್ನು ನೋಡಿದ ಅಧಿಕಾರಿಗಳು ಇದು ಪುನುಗು ಬೆಕ್ಕು (ಸಿವೆಟ್ಕ್ಯಾಟ್) ಆಗಿರುವ ಸಾಧ್ಯತೆ ಇದೆ. ಆದರೂ ರೈತರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು.
ನಾಲ್ಕೈದು ದಿನಗಳ ಹಿಂದೆ ಸಮೀಪದ ಹೊನ್ನಕಾಲುವೆ ಗ್ರ್ರಾಮದಲ್ಲಿ ಚಿರತೆಯೊಂದು ಹಸುವಿನ ಕರುವೊಂದನ್ನು ಹಿಡಿದುಕೊಂಡು ಹೋಗಿತ್ತು. ಚಿಕ್ಕಎಮ್ಮಿಗನೂರು, ಕಡೂರು, ಹೊನ್ನಕಾಲುವೆ ಸುತ್ತಲಿನ ಪ್ರದೇಶಗಳಲ್ಲಿ ಚಿರತೆ ಇರುವ ಮಾಹಿತಿ ಇದ್ದು, ಚಿಕ್ಕಎಮ್ಮಿಗನೂರು ಕಾವಲಿನಲ್ಲಿ ಬೋನು ಇಡಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಇದಾಯತ್ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.