ಸಿರಿಗೆರೆ: ಬೆಳಕು ಜ್ಞಾನದ ಸಂಕೇತವಾದರೆ, ಕತ್ತಲು ಅಜ್ಞಾನದ ಸಂಕೇತ. ಆದರೆ ನಮ್ಮಲ್ಲಿರುವ ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡುವಂತಾಗಬೇಕು. ದೀಪಗಳ ಹಬ್ಬವೂ ನಿಮ್ಮೆಲ್ಲರ ಬದುಕನ್ನು ಕತ್ತಲಿನಿಂದ ಬೆಳಕಿನಡೆಗೆ ಸಾಗುವಂತೆ ಮಾಡಬೇಕಾಗಿದೆ ಎಂದು ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ದೀಪಾವಳಿಯ ಸಂದೇಶ ನೀಡಿರುವ ಅವರು, ‘ದೀಪಗಳ ಹಬ್ಬ ಎಂದರೆ ಕೇವಲ ಹೊರಗಡೆ ದೀಪಗಳನ್ನು ಬೆಳಗಿಸುವುದಲ್ಲ. ಬದಲಾಗಿ ನಿಮ್ಮ ಆಂತರ್ಯದಲ್ಲಿ ಬೆಳಕು ಮೂಡುವಂತಾಗಬೇಕಾಗಿದೆ. ಕತ್ತಲಲ್ಲಿ ದೀಪ ಹಚ್ಚಿ ಆತ್ಮಾನುಸಂಧಾನ ಮಾಡುವ ಬದಲು ಪಟಾಕಿ ಹೊಡೆದು ಗಲಾಟೆ ಗದ್ದಲವೆಬ್ಬಿಸುವ ಮೂಲಕ ಹಬ್ಬ ವಿಕೃತರೂಪವಾಗುವುದನ್ನು ನಾವು ಕಾಣುತ್ತಿದ್ದೇವೆ. ದೀಪಗಳ ಬೆಳಕು ಹೆಚ್ಚಾಗುವ ಬದಲು ಪಟಾಕಿಗಳ ಹಾವಳಿಯಾಗಿದೆ’ ಎಂದು ವಿಷಾದಿಸಿದ್ದಾರೆ.
‘ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನಡೆಗೆ ಮತ್ತು ಮೃತ್ಯುವಿನಿಂದ ಅಮರತ್ವದೆಡೆಗೆ ಕರೆದೊಯ್ಯುವಂತಾಗಬೇಕಿದೆ. ಶತಮಾನಗಳಿಂದ ಗಿಳಿಪಾಠ ಹೇಳಿದ್ದೇವೆ ಮತ್ತು ಕೇಳುತ್ತಿದ್ದೇವೆ. ಇಂತಹ ಹಬ್ಬಗಳಂದು ಪುರಾಣ ಕಾಲದಲ್ಲಿದ್ದ ನರಕಾಸುರ, ತಾರಕಾಸುರ, ರಾವಣಾಸುರ ಇತ್ಯಾದಿ ರಾಕ್ಷಸರ ವಧೆಯಾಯಿತೆಂದು ತಿಳಿಯದೆ ಅವರೆಲ್ಲರೂ ನಮ್ಮೊಳಗೆ ಇನ್ನೂ ಜೀವಂತವಾಗಿದ್ದಾರೆ ಎಂದು ಭಾವಿಸಿ ನಮ್ಮೊಳಗಿರುವ ರಾಕ್ಷಸಿ ಗುಣಗಳನ್ನು ನಿರ್ಮೂಲನೆಗೊಳಿಸುವ ಪ್ರಯತ್ನ ಮಾಡಿದರೆ ಈ ಹಬ್ಬಗಳು ಸಾರ್ಥಕವಾಗುವುದರಲ್ಲಿ ಸಂದೇಹವಿಲ್ಲ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.