ADVERTISEMENT

ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷರ ನೇಮಕಕ್ಕೆ ಆಗ್ರಹ

ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಮಾಲೋಚನಾ ಸಭೆ, ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 9:26 IST
Last Updated 29 ಸೆಪ್ಟೆಂಬರ್ 2022, 9:26 IST
   

ಚಿತ್ರದುರ್ಗ: ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶಿವಮೂರ್ತಿ ಮುರುಘಾ ಶರಣರ ಬಂಧನವಾಗಿರುವುದರಿಂದ ಮುರುಘಾ ಮಠದ ದೈನಂದಿನ ಧಾರ್ಮಿಕ ಕೈಂಕರ್ಯ ಹಾಗೂ ಆಡಳಿತಾತ್ಮಕ ಚಟುವಟಿಕೆ ನಡೆಸಲು ನೂತನ ಪೀಠಾಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಮಾಲೋಚನಾ ಸಭೆ ನಿರ್ಣಯ ಕೈಗೊಂಡಿತು.

ಮುರುಘರಾಜೇಂದ್ರ ಪೀಠದ ಉಳಿವಿಗಾಗಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಚಿತ್ರದುರ್ಗ ತಾಲ್ಲೂಕಿನ ಸೀಬಾರದ ನಿಜಲಿಂಗಪ್ಪ ಸ್ಮಾರಕದಲ್ಲಿ ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ಗುರುವಾರ ಸಭೆ ಹಮ್ಮಿಕೊಂಡಿದ್ದರು. ಸಾವಿರಕ್ಕೂ ಹೆಚ್ಚು ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಮುದಾಯದ ಮುಖಂಡರು ಅಭಿಪ್ರಾಯ ಹಂಚಿಕೊಂಡರು.

ಮಾಜಿ ಸಚಿವ ಎಚ್.ಏಕಾಂತಯ್ಯ ಮಾತನಾಡಿ, ಮುರುಘಾ ಶರಣರು ಕೂಡಲೇ ಪೀಠತ್ಯಾಗ ಮಾಡಬೇಕು. ಇಲ್ಲವಾದರೆ ಅವರನ್ನು ಪೀಠದಿಂದ ವಜಾ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿ ಭಾಗವಹಿಸಿದ್ದವರು ಚಪ್ಪಾಳೆತಟ್ಟಿ ಅನುಮೋದಿಸಿದರು.

ADVERTISEMENT

ಇದೊಂದು ಸಂದಿಗ್ಧ ಸ್ಥಿತಿ. ಶಿವಮೂರ್ತಿ ಮುರುಘಾ ಶರಣರು ಸೆ.1ರಿಂದ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇದರಿಂದ ಮಠದ ದೈನಂದಿನ ಚಟುವಟಿಕೆಗೆ ತೊಂದರೆ ಉಂಟಾಗಿದೆ. ಮಠ ಹಾಗೂ ಮುರುಘಾ ಪರಂಪರೆಯ ಉಳಿವಿಗೆ ಹೊಸ ಪೀಠಾಧ್ಯಕ್ಷರ ಅಗತ್ಯವಿದೆ. ಕಾನೂನಾತ್ಮಕ ಹೋರಾಟ ನಡೆಸಲು ಸಿದ್ದರಾಗಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಂ.ಬಿ.ತಿಪ್ಪೇರುದ್ರಪ್ಪ, ಟಿ.ಎಚ್.ಬಸವರಾಜಪ್ಪ, ಪಿ.ರಮೇಶ್, ಸಮುದಾಯದ ಮುಖಂಡರಾದ ಎಸ್.ಷಣ್ಮುಖಪ್ಪ, ವಿಜಯಕುಮಾರ್, ಕೆ.ವಿ.ಪ್ರಭಾಕರ್, ಎಂ.ಟಿ.ಮಲ್ಲಿಕಾರ್ಜುನಯ್ಯ, ಜಿ.ಎಸ್.ಮಂಜುನಾಥ್ ಇದ್ದರು.

ಆರಂಭದಲ್ಲಿ ಸಭೆ ಗೊಂದಲದ ಗೂಡಾಗಿತ್ತು. ಶಿವಮೂರ್ತಿ ಮುರುಘಾ ಶರಣರ ಪರ ಹಾಗೂ ವಿರೋಧಿ ಬಣಗಳ ನಡುವೆ ಗಲಾಟೆ ನಡೆಯಿತು. ಶರಣರ ಪರವಾಗಿದ್ದ ಕೆಲವರು ಸಭೆಯಿಂದ ಹೊರನಡೆದ ಪ್ರಸಂಗವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.