ಸಿರಿಗೆರೆ: ಭರಮಸಾಗರದ ಸಮೀಪದ ಬಹದ್ದೂರುಘಟ್ಟದ ತರಳಬಾಳು ನರ್ಸರಿ ಮತ್ತು ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಭ್ರಮ ಮನೆಮಾಡಿತ್ತು.
ಶಾಲೆಯಲ್ಲಿ ಸಾಮೂಹಿಕವಾಗಿ ಹಮ್ಮಿಕೊಂಡಿದ್ದ ಮಕ್ಕಳ ಅಕ್ಷರಾಭ್ಯಾಸಕ್ಕಾಗಿ ಶೃಂಗರಿಸಿಕೊಂಡು ಬಂದಿದ್ದ ತಾಯಂದಿರು ತಮ್ಮ ಮಕ್ಕಳ ಕೈಹಿಡಿದು ಶಾಲೆಗೆ ಕರೆತಂದರು.
ವಿಘ್ನೇಶ್ವರ, ಸರಸ್ವತಿ ಪೂಜೆಯೊಂದಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಆರಂಭಿಸಲಾಯಿತು. ಮಕ್ಕಳನ್ನು ಮಡಿಲಲ್ಲಿ ಕೂರಿಸಿಕೊಂಡು ತಟ್ಟೆಯಲ್ಲಿ ತುಂಬಿದ ಅಕ್ಕಿಯ ಮೇಲೆ, ಅರಿಸಿನದ ಕೊಂಬಿನಿಂದ ಓಂಕಾರ ಮತ್ತು ಗಣೇಶನಾಮ ಮತ್ತು ಕನ್ನಡದ ಮೊದಲ ಅಕ್ಷರವನ್ನು ತಾಯಂದಿರು ಬರೆಸಿದರು.
ಈ ಸಂಭ್ರಮಕ್ಕೆ ಸಾಕ್ಷಿಯಾದ ಪೋಷಕಿ ಸಿ.ಆರ್.ಪಿ ವರಲಕ್ಷ್ಮಿ ಮಾತನಾಡಿ, ‘ಮಕ್ಕಳಿಗೆ ಇದು ಸಂಭ್ರಮದ ದಿನ. ಮಕ್ಕಳು ಆರಂಭದಲ್ಲಿ ತಮ್ಮ ತಂದೆ ತಾಯಿಗಳಿಂದ ಅಕ್ಷರಾಭ್ಯಾಸವನ್ನು ಆರಂಭಿಸುತ್ತಾರೆ. ಮಕ್ಕಳಿಗೆ ಯಾರೇ ಶಿಕ್ಷಣ ಕಲಿಸಿದರೂ ಮೊದಲು ತಾಯಿಯಿಂದ ಕಲಿಯುವಂತಹ ಶಿಕ್ಷಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದರು.
ಶಾಲೆಯ ಸಲಹಾ ಸಮಿತಿಯ ಉಪಾಧ್ಯಕ್ಷ ಎಚ್.ಎಸ್.ನಾಗರಾಜಪ್ಪ, ಕಲ್ಲಮ್ಮ ಪ್ರೌಢಶಾಲೆಯ ಕಾರ್ಯದರ್ಶಿ ಈ.ತಿಪ್ಪಣ್ಣ ಮಾತನಾಡಿದರು.
ಸಲಹಾ ಸಮಿತಿ ಅಧ್ಯಕ್ಷ ಕೆ.ಬಸವರಾಜಪ್ಪ, ಮುಖ್ಯ ಶಿಕ್ಷಕ ಎಸ್.ಎಂ ಸುನೀಲ್ಕುಮಾರ್, ಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.