ಚಿತ್ರದುರ್ಗ: ಹಿಂದೂ ಮಹಾ ಗಣಪತಿ ವಿಸರ್ಜನೆಗೆ ಶೋಭಾಯಾತ್ರೆ ಆರಂಭವಾಗಿದೆ. 15 ಅಡಿ ಎತ್ತರದ ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಸಾಗುತ್ತಿದೆ.
ಶೋಭಾಯಾತ್ರೆ ಅಂಗವಾಗಿ ಗಣೇಶ ಮೂರ್ತಿಗೆ ಬೆಳಿಗ್ಗೆಯಿಂದ ಪೂಜಾ ಕೈಂಕರ್ಯಗಳು ನೆರವೇರಿತು. ನಿವೃತ್ತ ಡಿವೈಎಸ್ಪಿ ಕವಳಪ್ಪ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೆಣೈ ಚಾಲನೆ ನೀಡಿದರು. ವಿವಿಧ ಮಠಾಧೀಶರು ಇದ್ದರು.
ಸ್ಟೇಡಿಯಂ ರಸ್ತೆಯಿಂದ ಹೊರಟ ಮೆರವಣಿಗೆ ಬಿ.ಡಿ ರಸ್ತೆ ತಲುಪಿದೆ.
ಜಿಲ್ಲಾಧಿಕಾರಿ ನಿಷೇಧ ಹೇರಿರುವ 'ಬನಾಯೆಂಗೆ ಮಂದಿರ್' ಹಾಡು ಡಿ.ಜೆ.ಯಲ್ಲಿ ಅನುರಣಿಸುತ್ತಿದೆ. ನಾಸಿಕ್ ಡೋಲು, ತಮಟೆ, ಉರುಮೆ ಸೇರಿ ಹಲವು ಕಲಾತಂಡಗಳು ಗಮನ ಸೆಳೆಯುತ್ತವೆ. ಶೋಭಾಯಾತ್ರೆಯಲ್ಲಿ ಕೇಸರಿ ಬಾವುಟ ರಾರಾಜಿಸುತ್ತಿವೆ. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.
ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಪುಣ್ಯಾನಂದ ಸ್ವಾಮೀಜಿ, ಸರದಾರ್ ಸೇವಾಲಾಲ್ ಸ್ವಾಮೀಜಿ, ಶಿವಲಿಂಗದ ಸ್ವಾಮೀಜಿ, ಬ್ರಹ್ಮನಿಷ್ಠಾನಂದ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಪ್ರಮುಖ್ ರಾಮಮೂರ್ತಿ, ಸಂಸದ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭಾಗವಹಿಸಿದ್ದಾರೆ.
ಶ್ರೀರಾಮ, ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣನ ಸ್ತಬ್ಧ ಚಿತ್ರ ಸಾಗುತ್ತಿವೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.