ಪ್ರಜಾವಾಣಿ ವಾರ್ತೆ
ಹಿರಿಯೂರು: ‘ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರು ದಂಡ ಹಾಕಿದ್ದಾರೆ ಎಂದು ಗೋಳಾಡುವ ಬದಲು ಮಾಸ್ಕ್ ಧರಿಸಿ ದಂಡದಿಂದ ತಪ್ಪಿಸಿಕೊಳ್ಳಿ, ಆರೋಗ್ಯ ಕಾಪಾಡಿಕೊಳ್ಳಿ’ ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಸಾರ್ವಜನಿಕರಿಗೆ ಮನವಿ ಮಾಡಿದರು.
ಇಲ್ಲಿನ ನಗರಸಭೆಯಲ್ಲಿ ಬ್ಯಾಂಕ್ ಆಫ್ ಬರೋಡಾದ ತೆರಿಗೆ ಪಾವತಿ ಕೇಂದ್ರದ ಕೌಂಟರ್ ಉದ್ಘಾಟನೆ, ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಮನೆ ಮನೆಯ ಕಸ ಸಂಗ್ರಹಣೆಗೆ ಕಸದಬುಟ್ಟಿಗಳ ವಿತರಣೆ, ನಾಲ್ಕು ಆಟೊ ಟಿಪ್ಪರ್ಗಳ ಲೋಕಾರ್ಪಣೆ ಹಾಗೂ ಕೋವಿಡ್ ಜಾಗೃತಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
‘ಐದಾರು ತಿಂಗಳುಗಳಿಂದ ಕೋವಿಡ್ನಿಂದ ಮುಕ್ತವಾಗಿದ್ದ ಹಿರಿಯೂರಿನಲ್ಲಿ ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ವಿಚಾರ. ಆರೋಗ್ಯ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆ ಸಿಬ್ಬಂದಿ ಜನರ ಆರೋಗ್ಯ ರಕ್ಷಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಎಲ್ಲದಕ್ಕೂ ಸರ್ಕಾರವನ್ನು ದೂಷಿಸುವ ಬದಲು ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಂಡರೆ ಕೋವಿಡ್ ಹರಡುವುದನ್ನು ತಡೆಯಬಹುದು. ಪೊಲೀಸರು ದಂಡ ಹಾಕುತ್ತಿದ್ದಾರೆ ಎಂದು ಯಾರೂ ನನಗೆ ಕರೆ ಮಾಡಬೇಡಿ’ ಎಂದು ತಿಳಿಸಿದರು.
‘ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬರುವವರೆಗೂ ಹಬ್ಬ, ಜಾತ್ರೆ, ಉತ್ಸವ, ನಾಟಕ ಇತ್ಯಾದಿ ಕಾರ್ಯಕ್ರಮ ನಡೆಸಲು ಅನುಮತಿ ಕೊಡಿಸಿ ಎಂದು ಅರ್ಜಿ ತರಬೇಡಿ. ಮೊದಲು ಜೀವ, ನಂತರ ಜೀವನ, ತದನಂತರ ಉಳಿದ ಆಚರಣೆಗಳು’ ಎಂದು ಹೇಳಿದರು.
ಪೂರ್ಣಿಮಾ ಅವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಮಾಸ್ಕ್ ವಿತರಿಸಿ, ಕೋವಿಡ್ ನಿಯಮ ಪಾಲಿಸುವಂತೆ ಬುದ್ಧಿಮಾತು ಹೇಳಿದರು.
ನಗರಸಭಾಧ್ಯಕ್ಷೆ ಷಂಸುನ್ನೀಸಾ, ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ಪೌರಾಯುಕ್ತೆ ಲೀಲಾವತಿ, ಸದಸ್ಯರಾದ ಎಂ.ಡಿ. ಸಣ್ಣಪ್ಪ, ಬಾಲಕೃಷ್ಣ, ಪಲ್ಲವ, ಅಜ್ಜಣ್ಣ, ಈರಲಿಂಗೇಗೌಡ, ಅನಿಲ್ ಕುಮಾರ್, ಕದ್ರುಗಣೇಶ್, ಜಯಶೀಲ, ಮಮತಾ, ಮದಲ ಮರಿಯಾ, ರತ್ನಮ್ಮ, ಅಂಬಿಕಾ, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಜೇಶ್ವರಿ ಅವರೂ ಇದ್ದರು.
ನೂತನ ಸದಸ್ಯರಾದ ಜಬೀವುಲ್ಲಾ, ವಿಠಲ್, ಗೀತಾಗಂಗಾಧರ್, ನಾಮನಿರ್ದೇಶಿತ ಸದಸ್ಯರಾದ ಕೇಶವಮೂರ್ತಿ, ಮಹಿಪಾಲ್, ಬಿ.ಎನ್. ತಿಪ್ಪೇಸ್ವಾಮಿ, ಸ್ವಾಮಿ, ನಾಗರಾಜ್, ಜಗದೀಶ್ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.