ಚಿತ್ರದುರ್ಗ: ಶರಣರ ಚಳವಳಿಯ ಅರಿವಿನ ಮಾರ್ಗವನ್ನು ಮತ್ತೆ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ‘ಮತ್ತೆ ಕಲ್ಯಾಣ’ ಆಂದೋಲನಕ್ಕೆ ಸಿದ್ಧತೆ ನಡೆಯುತ್ತಿದೆ.
ಸಹಮತ ವೇದಿಕೆ ಈ ಆಂದೋಲನ ರೂಪಿಸುತ್ತಿದೆ. ಆ.1ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಿಂದ ಆರಂಭವಾಗುವ ಆಂದೋಲನ, ಆ.30ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮುಕ್ತಾಯವಾಗಲಿದೆ. ಆಂದೋಲನದ ಅಂಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸ್ವಾಮೀಜಿ ಭೇಟಿ ನೀಡಲಿದ್ದಾರೆ.
‘ಕೆಡುವುದು ಸುಲಭ, ಕಟ್ಟುವುದು ಕಷ್ಟ. ಮುಂದಿನ ಪೀಳಿಗೆಗೆ ದೊರಕಬೇಕಾದ ಮಾನವೀಯತೆಯ ಭದ್ರ ಬುನಾದಿಗೆ ಶ್ರಮಿಸೋಣ. ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಮತ್ತೆ ಕಲ್ಯಾಣದ ದಾರಿಯಲ್ಲಿ ಸಾಗೋಣ ಬನ್ನಿ...’ ಎಂದು ಚಿತ್ರದುರ್ಗದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕರೆನೀಡಲಾಯಿತು. ನಾಡಿನ ಚಿಂತಕರು, ಸಾಹಿತಿಗಳು ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾಜದ ಇಂದಿನ ತಲ್ಲಣಗಳಿಗೆ ಪರಿಹಾರವನ್ನು ಹುಡುವುದು ಆಂದೋಲನದ ಉದ್ದೇಶ. ಭೇಟಿ ನೀಡುವ ಪ್ರತಿ ಊರಿನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪಂಡಿತಾರಾಧ್ಯ ಸ್ವಾಮೀಜಿ ಮುಕ್ತ ಸಂವಾದ ನಡೆಸಲಿದ್ದಾರೆ. ಎಲ್ಲ ಜಾತಿ ಹಾಗೂ ಧರ್ಮದ ಜನರೊಂದಿಗೆ ‘ಸಾಮರಸ್ಯ ನಡಿಗೆ’ಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಸಾರ್ವಜಕರೊಂದಿಗೆ ಸಂವಾದ ನಡೆಸಲಿದ್ದು, ನಿತ್ಯ ರಾತ್ರಿ ‘ಶಿವಸಂಚಾರ’ದ ಕಲಾವಿದರು ನಾಟಕ ಪ್ರದರ್ಶನ ಮಾಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.