ADVERTISEMENT

ಗಣಿಬಾಧಿತ ಪ್ರದೇಶದಲ್ಲಿ ಗ್ರಾಮ ವಾಸ್ತವ್ಯ ಮಾಡಿ: ಎಚ್‌. ರಮೇಶ್‌

ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವಕ್ಕೆ ಹೋರಾಟಗಾರರ ವಿರೋಧ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:34 IST
Last Updated 5 ನವೆಂಬರ್ 2025, 7:34 IST
ಎಚ್‌.ರಮೇಶ್‌
ಎಚ್‌.ರಮೇಶ್‌   

ಚಿತ್ರದುರ್ಗ: ‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಆಚರಣೆ ಮಾಡುವ ಬದಲಿಗೆ ಮಂಡಳಿ ಅಧ್ಯಕ್ಷರು, ಅಧಿಕಾರಿಗಳು, ಜನಪ್ರತಿನಿಧಿಗಳು ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿ ಗ್ರಾಮ ವಾಸ್ತವ್ಯ ಮಾಡಬೇಕು. ಆ ಮೂಲಕ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಗಣಿಬಾಧಿತ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಚ್‌. ರಮೇಶ್‌ ಆಗ್ರಹಿಸಿದರು.

‘ನ.5ರಂದು ನಗರದಲ್ಲಿ ಚಿತ್ರದುರ್ಗ– ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಗಣಿ ಲಾರಿಗಳ ದೂಳಿನಿಂದ ಜನ ಕಂಗಾಲಾಗಿರುವ ಸಂದರ್ಭದಲ್ಲಿ ಯಾವ ಪುರುಷಾರ್ಥಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಆಚರಿಸಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಮಂಡಳಿ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಹಾಗೂ ಅಧಿಕಾರಿಗಳು ಗಣಿಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ಅಲ್ಲಿನ ಜನರ ನೋವು ನಿವಾರಿಸಬೇಕು. ಗಣಿ ಲಾರಿಗಳ ನಿರಂತರ ಓಡಾಟದಿಂದಾಗಿ ಕೃಷಿಕರ ಬದುಕು ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮಾಚರಣೆ ಬೇಡ’ ಎಂದರು.

ADVERTISEMENT

‘ಜಿಲ್ಲೆಯಲ್ಲಿನ ಕಾರ್ಯನಿರ್ವಹಿಸುತ್ತಿರುವ ಗಣಿ ಕಂಪನಿಗಳು ನಿಯಮಾನುಸಾರ ಅನುಮತಿ ಪಡೆದು ಸ್ಫೋಟ ನಡೆಸುತ್ತಿವೆಯೇ, ವನ್ಯ ಜೀವಿಗಳ ಮೇಲೆ ಗಣಿಗಾರಿಕೆತಿಂದ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಸಮಿತಿ ರಚಿಸಲಾಗಿದೆ. ಆದರೆ ಇಲ್ಲಿಯವರೆಗೆ ಸಮಿತಿ ಸದಸ್ಯರು ಗಣಿ ಪ್ರದೇಶಕ್ಕೆ ಭೇಟಿ ನೀಡಿಲ್ಲ, ಪರಿಶೀಲಿಸಿಲ್ಲ’ ಎಂದು ಆರೋಪಿಸಿದರು.

‘ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ(ಕೆಎಸ್‌ಆರ್‌ಎಸ್‌ಎಸಿ) ಅಧಿಕಾರಿಗಳು ಸಮಿತಿಯಲ್ಲಿ ಇದ್ದಾರೆ. ಈವರೆಗೆ ಯಾರೂ ಭೇಟಿ ನೀಡಿಲ್ಲ. ಜಿಲ್ಲಾ ಪರಿಸರ ಅಧಿಕಾರಿ ಇದ್ದರೂ ಇಲ್ಲದಂತಿದ್ದಾರೆ. ಅವರು ಕಚೇರಿ ಬಿಟ್ಟು ಹೊರಗೆ ಬರುತ್ತಿಲ್ಲ, ಪರಿಸರ ಕಾಪಾಡುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

‘ಗಣಿಬಾಧಿತ ಹಳ್ಳಿಗಳ ಸಂರಕ್ಷಣೆಗೆ ರಾಜ್ಯ ಗಣಿ ಪುನಶ್ಚೇತನ ನಿಗಮದಿಂದ ಕೋಟ್ಯಂತರ ರೂಪಾಯಿ ಹಣ ಬರುತ್ತಿದೆ. ಆದರೂ ಅದು ನಿಗದಿತ ಉದ್ದೇಶಕ್ಕೆ ಸದ್ಬಳಕೆಯಾಗುತ್ತಿಲ್ಲ. ಈ ವಿಚಾರವನ್ನು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ನಾವು ನಿರಂತರವಾಗಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಅಹಿಂಸಾ ಮಾತನಾಡಿ ‘ರಾಜ್ಯದಲ್ಲಿ ಅತ್ಯಂತ ಸುಲಭವಾಗಿ ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತಿದೆ. ಈಗ ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮೋದನೆಯೇ ಬೇಕಾಗಿಲ್ಲ. ಅತೀ ಸುಲಭವಾಗಿ ಅನುಮತಿ ಪಡೆದು ಪ್ರಾಕೃತಿಕ ಸಂಪನ್ಮೂಲವನ್ನು ಲೂಟಿ ಮಾಡಬಹುದು. ಗಣಿ ಮಾಫಿಯಾದಲ್ಲಿ ರಾಜ್ಯ ಸರ್ಕಾರ ನೇರವಾಗಿ ಭಾಗಿಯಾಗಿದೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿ ಗಣಿ ಲೂಟಿಕೋರರಿಗೆ ಬುದ್ಧಿ ಕಲಿಸುವುದಾಗಿ ಹೇಳಿದ್ದರು. ಪಾಕೃತಿಕ ಸಂಪನ್ಮೂಲವನ್ನು ರಕ್ಷಿಸುವುದಾಗಿ ಮಾತು ಕೊಟ್ಟಿದ್ದರು. ಮುಖ್ಯಮಂತ್ರಿಯಾದ ನಂತರ ತಾವು ಕೊಟ್ಟಿದ್ದ ಮಾತು ಮರೆತಿದ್ದಾರೆ. ಬೇಕಾಬಿಟ್ಟಿಯಾಗಿ ಗಣಿಗಾರಿಕೆಗೆ ನಡೆಸಲು ಅನುಮತಿ ನೀಡುತ್ತಿದ್ದಾರೆ’ ಎಂದು ದೂರಿದರು.

ರಾಜ್ಯ ಘಟಕದ ಅಧ್ಯಕ್ಷ ಪಲ್ಲಕ್ಕಿ ರಾಧಾಕೃಷ್ಣ ಇದ್ದರು.

ಅಹಿಂಸಾ ಚೇತನ್‌

ಸುರಂಗ ಮಾರ್ಗ ಕೈಬಿಡಿ ‘

ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆಯನ್ನು ಕೈಬಿಟ್ಟು ಲಾಲ್‌ಬಾಗ್‌ ಉಳಿಸಬೇಕು. ಈ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ಧ್ವನಿಗೆ ನಾವು ಧ್ವನಿಯಾಗುತ್ತೇವೆ. ಗೌರವಯುತ ಸ್ಥಾನದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೇಜಸ್ವಿ ಸೂರ್ಯ ಅವರಿಗೆ ಹಗುರವಾಗಿ ಮಾತನಾಡಿದ್ದು ತಪ್ಪು’ ಎಂದು ಸಾಮಾಜಿಕ ಹೋರಾಟಗಾರ ನಟ ಚೇತನ್‌ ಅಹಿಂಸಾ ತಿಳಿಸಿದರು. ‘ಈ ಯೋಜನೆಗೆ ಸಾವಿರಾರು ಕೋಟಿ ಖರ್ಚು ಮಾಡುವ ಬದಲು ರಾಜ್ಯ ಸರ್ಕಾರ‌ ಸುಸ್ಥಿರ ದೀರ್ಘಾವಧಿಯ ಸಾರಿಗೆ ಪರಿಹಾರಗಳಲ್ಲಿ ಹೂಡಿಕೆ ಮಾಡಬೇಕು. ಮೆಟ್ರೊ ಉಪನಗರ ರೈಲು ಬಿಎಂಟಿಸಿ ಜಾಲಗಳನ್ನು ಬಲಪಡಿಸಬೇಕು. ಹಸಿರು ಉಳಿಸುವ ದೂರದೃಷ್ಟಿಯ ಮೂಲಸೌಕರ್ಯ ಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.