ADVERTISEMENT

ಅಸಂಬದ್ಧ ಮಾತು ಶೋಭೆ ತರುವುದಿಲ್ಲ: ಸಿದ್ದರಾಮಯ್ಯ ವಿರುದ್ಧ ಸಚಿವ ಹಾಲಪ್ಪ ಕಿಡಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 9:52 IST
Last Updated 5 ಜುಲೈ 2022, 9:52 IST
ಹಾಲಪ್ಪ ಆಚಾರ್
ಹಾಲಪ್ಪ ಆಚಾರ್   

ಚಿತ್ರದುರ್ಗ: ಅಸಂಬದ್ಧವಾಗಿ ಮಾತನಾಡುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಅವರದು ಆಧಾರರಹಿತ ಹಾಗೂ ಅರ್ಥವಿಲ್ಲದ ಆರೋಪ ಎಂದು ಗಣಿ, ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಪೊಲೀಸ್‌ ಇಲಾಖೆಯಲ್ಲಿ ನಡೆಯುವ ಎಲ್ಲ ತಪ್ಪುಗಳಿಗೆ ಗೃಹಸಚಿವರು ಕಾರಣರಲ್ಲ. ತಪ್ಪು ಮಾಡಿದ ಎಲ್ಲರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಸರ್ಕಾರದ ಸ್ಪಷ್ಟ ನಿಲುವು. ಪಿಎಸ್‌ಐ ಹಗರಣವನ್ನು ಸರ್ಕಾರವೇ ಬಯಲಿಗೆ ತಂದಿದೆ. ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗ ಈ ಕೆಲಸ ಆಗಿಲ್ಲ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದ್ದು, ಐಪಿಎಸ್‌, ಐಎಎಸ್ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ದಾಖಲೆ ಬಿಡುಗಡೆ ಮಾಡಿದರೆ ಸರ್ಕಾರ ಪತನವಾಗುತ್ತದೆ’ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಹಿಟ್‌ ಅಂಡ್ ರನ್ ಹೇಳಿಕೆ ನೀಡುವ ಬದಲು ಸಾಕ್ಷ್ಯ ಮತ್ತು ಹೆಸರುಗಳಿದ್ದರೆ ಬಹಿರಂಗಪಡಿಸಿ. ಇದರಿಂದ ರಾಜ್ಯಕ್ಕೆ ಒಳಿತಾಗುತ್ತದೆ. ಪ್ರಚಾರಕ್ಕಾಗಿ ಮಾತನಾಡುವುದನ್ನು ಬಿಡಿ’ ಎಂದು ತಿರುಗೇಟು ನೀಡಿದರು.

‘ಹಸಿರು ವಲಯದ ವ್ಯಾಪ್ತಿಯಲ್ಲಿ ನಿರಾಕ್ಷೇಪಣೆ ಪಡೆಯದೇ ಗಣಿಗಾರಿಕೆ ನಡೆಸಲು ಅವಕಾಶವಿಲ್ಲ. ಒಂದು ವೇಳೆ ಗಣಿಗಾರಿಕೆ ನಡೆಸಿದ್ದು ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು. ‘ಸಿ’ ಕೆಟಗರಿ ಗಣಿಗಾರಿಕೆ ಪ್ರದೇಶವನ್ನು ಗುರುತಿಸಿ ಟೆಂಡರ್ ಮೂಲಕ ಪಾರದರ್ಶಕವಾಗಿ ಅನುಮತಿ ನೀಡಲಾಗುತ್ತಿದೆ. ಅಕ್ರಮ ತಡೆಯಲು ಎಲ್ಲ ಲಾರಿಗಳಿಗೂ ಜಿಪಿಎಸ್‌ ಆಳವಡಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.