ಚಿತ್ರದುರ್ಗ: ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಚಿತ್ರದುರ್ಗಕ್ಕೆ ಗುರುವಾರ ಭೇಟಿ ನೀಡಿದ್ದರು.
ಪಾವಗಡದಿಂದ ಶಿವಮೊಗ್ಗದಕ್ಕೆ ತೆರಳುತ್ತಿದ್ದ ಅವರು ಮಾರ್ಗ ಮಧ್ಯೆ ವಿಶ್ವ ಹಿಂದೂ ಪರಿಷತ್ ಹಿರಿಯ ನಾಯಕ ಜ.ರಾ.ರಾಮಮೂರ್ತಿ ಮನೆಗೆ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು.
ನಗರದ ಜೆಸಿಆರ್ ಬಡಾವಣೆಯ ರಾಮಮೂರ್ತಿ ನಿವಾಸಕ್ಕೆ ಸಂಜೆ 7.10ಕ್ಕೆ ಆಗಮಿಸಿದ ಭಾಗವತ್ ಅವರಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು. ಆಯ್ದ ಕೆಲವರಿಗೆ ಮಾತ್ರ ಮನೆಯೊಳಗೆ ಪ್ರವೇಶ ಕಲ್ಪಿಸಲಾಗಿತ್ತು. ಆರ್ಎಸ್ಎಸ್ ಸಹ ಸರಕಾರ್ಯವಾಹಕರಾದ ಮುಕುಂದ, ದತ್ತಾತ್ರೆಯ ಹೊಸಬಾಳೆ ಹಾಗೂ ಕ್ಷೇತ್ರೀಯ ಸಹ ಪ್ರಚಾರಕ ಸುಧೀರ್ ಜೊತೆಗೆ ಇದ್ದರು.
ಮುಕುಂದ ಅವರ ಸ್ವಗ್ರಾಮ ಪಾವಗಡ ತಾಲ್ಲೂಕಿನ ಸಿ.ಕೆ.ಪುರದಲ್ಲಿ ಎರಡು ದಿನ ನಡೆದ ಗ್ರಾಮ ವಿಕಾಸ ದೀಪ ಪೂಜೆಯಲ್ಲಿ ಭಾಗವತ್ ಪಾಲ್ಗೊಂಡಿದ್ದರು. ಚಳ್ಳಕೆರೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ ಅವರು ಭಾಗವತ್ ಅವರನ್ನು ಭೇಟಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.