ADVERTISEMENT

ನಾಯಕನಹಟ್ಟಿ | 'ಬಾಲ್ಯ ವಿವಾಹಕ್ಕೆ ಬಾಲಕಿಯರು ಪ್ರತಿರೋಧ ತೋರಲಿ'

ಅಂಗನವಾಡಿಗಳ ಮೇಲ್ವಿಚಾರಕಿ ಆರ್.ನಾಗರತ್ನಮ್ಮ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:34 IST
Last Updated 9 ನವೆಂಬರ್ 2023, 16:34 IST
ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಅಂಗನವಾಡಿಗಳ ಮೇಲ್ವಿಚಾರಕಿ ಆರ್.ನಾಗರತ್ನಮ್ಮ ಮಾತನಾಡಿದರು.
ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಅಂಗನವಾಡಿಗಳ ಮೇಲ್ವಿಚಾರಕಿ ಆರ್.ನಾಗರತ್ನಮ್ಮ ಮಾತನಾಡಿದರು.   

ನಾಯಕನಹಟ್ಟಿ: ಪಾಲಕರು ಬಾಲ್ಯವಿವಾಹಕ್ಕೆ ಮುಂದಾದರೆ ಬಾಲಕಿಯರು ಪ್ರತಿರೋಧ ತೋರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಆರ್.ನಾಗರತ್ನಮ್ಮ ತಿಳಿಸಿದರು.

ಹೋಬಳಿಯ ನೇರಲಗುಂಟೆ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನೇರಲಗುಂಟೆ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸಂದರ್ಭದಲ್ಲಿ ಅತಿಹೆಚ್ಚು ಬಾಲ್ಯವಿವಾಹಗಳು ನಡೆದಿವೆ. ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿಗಳ ನೆಪಹೇಳಿ ಬಾಲಕಿಯರಿಗೆ ವಿವಾಹ ಮಾಡಲು ಮುಂದಾದರೆ ಯಾವ ಬಾಲಕಿಯರೂ ಹೆದರುವ ಅವಶ್ಯಕತೆ ಇಲ್ಲ. ಸಮೀಪದ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರೆ ಇಲಾಖೆ ಗಮನಕ್ಕೆ ಬರುತ್ತದೆ. ಇಲ್ಲವಾದರೆ 1098 ಮಕ್ಕಳ ಸಹಾಯವಾಣಿಗೂ ಕರೆ ಮಾಡಬಹುದು ಎಂದು ಅವರು ಹೇಳಿದರು.

ADVERTISEMENT

ಬಾಲಕಿಯರ ಮೇಲೆ ಶಾಲೆಗಳಲ್ಲಿ, ರಸ್ತೆಗಳಲ್ಲಿ, ನೆರೆಹೊರೆಯ ಪ್ರದೇಶಗಳಲ್ಲಿ ಯಾವುದೇ ರೀತಿಯ ದೌರ್ಜನ್ಯಗಳು ನಡೆದರೂ ಕರೆ ಮಾಡಬಹುದು. ಕಳ್ಳಸಾಗಾಣಿಕೆ ಬಗ್ಗೆ ಮಕ್ಕಳು ಜಾಗರೂಕರಾಗಿರಬೇಕು. ಹೋಟೆಲ್, ಇಟ್ಟಿಗೆ ಬಟ್ಟಿಗಳು, ಗ್ಯಾರೇಜ್‌ಗಳಲ್ಲಿ ಮಕ್ಕಳಿಂದ ದುಡಿಸಿಕೊಳ್ಳುವಂತಿಲ್ಲ. ಬಾಲಕಾರ್ಮಿಕ ಪದ್ಧತಿಯು ಶಿಕ್ಷಾರ್ಹ ಅಪರಾಧವಾಗಿದ್ದು, ಮಕ್ಕಳು ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಪ್ಪ, ಉಪಾಧ್ಯಕ್ಷೆ ದುರುಗಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಪಾಪಣ್ಣ, ಪಿಡಿಒ ಹನುಮಂತಕುಮಾರ್, ಮುಖ್ಯಶಿಕ್ಷಕಿ ನಾಗರತ್ನಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.