ಸಾಣೇಹಳ್ಳಿ (ಹೊಸದುರ್ಗ): ‘ಇಂದು 12ನೇ ಶತಮಾನದ ಶರಣರು ತೋರಿದ ದಾರಿಯಲ್ಲಿ ನಡೆಯುವಂತಾದರೆ ಮತ್ತೆ ಕಲ್ಯಾಣ ಸಾಕಾರಗೊಳ್ಳಲು ಸಾಧ್ಯ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಗ್ಲೋಬಲ್ ಫೌಂಡೇಷನ್ ಅಂತರ್ಜಾಲದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ವಿಶ್ವ ಬಸವ ಜಯಂತಿ ಮತ್ತು ಬಸವ ಸೆಂಟರ್ ಆಫ್ ನಾರ್ತ್ ಅಮೆರಿಕ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಸವಣ್ಣ ಪೂಜಾರಿಗಳ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಿದರು. ಆದರೆ ಇಂದು ಆಗುತ್ತಿರುವುದೇನು? ಈಗಲೂ ಜನರು ಗುಡಿಯ ಹಂಗಿನಿಂದ ಹೊರಬಂದಿಲ್ಲ. ಬಸವಣ್ಣನವರು ಯಜ್ಞ-ಯಾಗಗಳನ್ನು ಬಲವಾಗಿ ಖಂಡಿಸಿದರು. ಇಂದು ಕೆಲವು ಗೃಹಸ್ಥರಲ್ಲದೆ ರಾಜಕೀಯ, ಧಾರ್ಮಿಕ ಕ್ಷೇತ್ರದ ನೇತಾರರು ತಮ್ಮ ಚಟುವಟಿಕೆಯನ್ನು ಪ್ರಾರಂಭಿಸುವುದೇ ಯಜ್ಞ-ಯಾಗಗಳಿಂದ. ಮಾರ್ಗದರ್ಶಕರೇ ಮಾರ್ಗ
ತಪ್ಪಿದಾಗ ಜನಸಾಮಾನ್ಯರ ಗತಿ ಏನು’ ಎಂದು ಪ್ರಶ್ನಿಸಿದರು.
‘ಆದರ್ಶ ವ್ಯಕ್ತಿಗಳ ಕೆಲಸ ಕಾರ್ಯ ಕಂಡು ಖುಷಿಪಡುವವರಿಗಿಂತ ಅವರನ್ನು ನಿಂದಿಸುವವರೇ ಹೆಚ್ಚು ಪ್ರಚಾರದಲ್ಲಿರುತ್ತಾರೆ. ಹಾಗಂತ ಆದರ್ಶ ಜೀವಿಗಳು ಅದರಿಂದ ನೊಂದುಕೊಂಡು ತಮ್ಮ ಬದುಕನ್ನೇನೂ ಬದಲಾಯಿಸಿಕೊಳ್ಳುವುದಿಲ್ಲ’ ಎಂದರು.
ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಅಕ್ಕ ಅನ್ನಪೂರ್ಣ, ಈಶ್ವರ ಮಂಟೂರ್ ಮಾತನಾಡಿದರು.
ವಿಶ್ವದ ವಿವಿಧ ಸಂಘ-ಸಂಸ್ಥೆಗಳು ಸೇರಿ ಕಾರ್ಯಕ್ರಮ ಆಯೋಜಿಸಿದ್ದವು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂದೇಶ ನೀಡಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮಾಜಿ ಸಚಿವ ಎಂ.ಬಿ. ಪಾಟೀಲ್, ಬಿ.ವೈ. ವಿಜಯೇಂದ್ರ, ಶಿವಾನಂದ ಜಾಮದಾರ್, ಡಿ.ಪಿ. ಪ್ರಕಾಶ್, ಗಂಗಾ ಮಾತಾಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.