ಧರ್ಮಪುರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಸಂಪೂರ್ಣವಾಗಿ ಕೋವಿಡ್-19 ಆಸ್ಪತ್ರೆ ಆಗಿರುವು ದರಿಂದ ಹೋಬಳಿಯ ಸುತ್ತ ಮುತ್ತಲಿನ ಗ್ರಾಮಗಳ ಹೊರರೋಗಿಗಳು ಚಿಕಿತ್ಸೆಗೆ ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಹಾಗೂ ಕ್ವಾರಂಟೈನ್ ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಾಗಿರುವ ಕಾರಣ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಜೂನ್ ತಿಂಗಳಿನಲ್ಲಿ ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಈಗಾಗಲೇ 232 ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಆದರೆ, ಗಡಿ ಹೋಬಳಿ ಆಗಿರುವ ಧರ್ಮಪುರ ಸುತ್ತಮುತ್ತ ಸುಮಾರು 72 ಹಳ್ಳಿಗಳು ಇದ್ದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿತ್ಯ ಕನಿಷ್ಠ 300ರಿಂದ 400 ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ಆಸ್ಪತ್ರೆಯಾದ ಮೇಲೆ ಮೂರ್ನಾಲ್ಕು ತಿಂಗಳಿನಿಂದ ಹೊರ ರೋಗಿಗಳು ಪರದಾಡುವಂತಾಗಿದೆ.
ತಾತ್ಕಾಲಿಕ ಚಿಕಿತ್ಸಾ ಕೇಂದ್ರ: ಹೊರ ರೋಗಿಗಳ ಅನುಕೂಲಕ್ಕೆ ಆರೋಗ್ಯ ಇಲಾಖೆ ಇಲ್ಲಿನ ಬಾಲಕರ ಮೆಟ್ರಿಕ್ಪೂರ್ವ ವಿದ್ಯಾರ್ಥಿನಿಲಯದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದಿದೆ. ಆದರೆ, ಬೆಳಿಗ್ಗೆಯಿಂದ ಸಂಜೆವರೆಗೆ ಮಾತ್ರ ಕಾರ್ಯ ನಿರ್ವಹಿಸಲಾಗುತ್ತಿದೆ. ರಾತ್ರಿ ವೇಳೆ ಅಪಘಾತ ಸಂಭವಿಸದರೆ, ಹಾವು, ಚೇಳು ಕಡಿದರೆ, ಗರ್ಭಿಣಿಯರು ಇಂತಹ ತುರ್ತು
ಚಿಕಿತ್ಸೆ ಅಗತ್ಯವಿರುವ ರೋಗಿಗಳು ದೂರದ ಹಿರಿಯೂರು ಇಲ್ಲವೇ ಚಿತ್ರದುರ್ಗವನ್ನೇ ಅವಲಂಬಿಸಬೇಕಿದೆ.
ಕೊರೊನಾ ಕಾರಣ ಖಾಸಗಿ ಬಸ್ಗಳ ಸೇವೆ ಹೆಚ್ಚಾಗಿ ಆರಂಭ ವಾಗಿಲ್ಲ. ಇಂತಹ ಸಂದರ್ಭದಲ್ಲಿ ಬೇತೂರು ಪಾಳ್ಯ, ಖಂಡೇನಹಳ್ಳಿ, ಹರಿಯಬ್ಬೆ, ಅಬ್ಬಿನಹೊಳೆ ಪ್ರಾಥಮಿಕ ಕೇಂದ್ರಗಳಿಗೂ ರೋಗಿಗಳು ಹೋಗಲಾರದ ಪರಿಸ್ಥಿತಿ ಎದುರಾಗಿದೆ.
ರಾತ್ರಿ ವೇಳೆಯೂ ಸೇವೆ ಆರಂಭಿಸಿ: ಇಲ್ಲಿನ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ತಾತ್ಕಾಲಿಕವಾಗಿ ಆರಂಭವಾಗಿರುವ ಆರೋಗ್ಯ ಸೇವೆ ರಾತ್ರಿ ವೇಳೆಯೂ ಮುಂದುವರಿಯಲಿ ಎಂದು ನಾಗರಿಕರು ಒತ್ತಾಯಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.