ಹೊಸದುರ್ಗ: ‘ಸಹನೆ ಅಜ್ಞಾನಿ ಅಥವಾ ಹೇಡಿಗಳ ಅಸ್ತ್ರವಲ್ಲ, ವಿವೇಕಿ ಅಥವಾ ವೀರ ಯೋಧನ ಅಸ್ತ್ರ. ಬಂದೂಕು ಇದ್ದ ಮಾತ್ರಕ್ಕೆ ವೀರ, ಶೂರನಾಗಲು ಸಾಧ್ಯವಿಲ್ಲ. ಆ ಬಂದೂಕನ್ನು ಎಲ್ಲಿ, ಯಾವಾಗ, ಹೇಗೆ, ಏಕೆ ಬಳಸಬೇಕು? ಎನ್ನುವ ವಿವೇಕದಿಂದ ಮಾತ್ರ ಶೂರ, ವೀರ, ಧೀರ ಆಗಲು ಸಾಧ್ಯ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ಸೋಮವಾರ ಬೆಳಿಗ್ಗೆ ನಡೆದ ಚಿಂತನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
‘ತಾಳ್ಮೆಯ ಸಂಸ್ಕಾರ ಸಿಗಬೇಕಾದದ್ದು ಮನಸ್ಸಿಗೆ. ಯಾರು ತನ್ನ ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳು ವರೋ ಆ ವ್ಯಕ್ತಿ ತಾಳ್ಮೆ ಕಳೆದುಕೊಳ್ಳಲಾರರು. ವಿವೇಕ ಇಲ್ಲದವರು ಮಾತ್ರ ತಾಳ್ಮೆ ಕಳೆದುಕೊಳ್ಳುವರು. ಸಹನೆ ಯಿಂದಲೇ ಹೃದಯ ಶ್ರೀಮಂತಿಕೆಯೂ ಹೆಚ್ಚುವುದು’ ಎಂದು ಹೇಳಿದರು.
‘ಸಹನೆ’ ಕುರಿತು ಮಾತನಾಡಿದ ಸಾಣೇಹಳ್ಳಿಯ ಚಿಂತಕ ಸಾ.ನಿ.ರವಿಕುಮಾರ್, ‘ಇಂದಿನ ಮಕ್ಕಳೇ, ನಾಳಿನ ಪ್ರಜೆಗಳು ಎನ್ನುವ ಮಾತಿದೆ. ಆದರೆ, ಮಕ್ಕಳು ಕೇವಲ ವಯಸ್ಸಿನ ಕಾರಣಕ್ಕೆ ಪ್ರಜೆಗಳಾದರೆ ಸಾಲದು, ಅವರು ಸತ್ಪ್ರಜೆಗಳಾಗಬೇಕು ಎಂಬುದು ಪಂಡಿತಾರಾಧ್ಯ ಶ್ರೀಗಳ ಆಶಯ. ಗಾಂಧೀಜಿಯವರು ತಮ್ಮ ತಾಳ್ಮೆ, ಸಹನೆಗಳಿಂದಲೇ ಮಹಾತ್ಮರಾದುದು’ ಎಂದರು.
ಶಿವಸಂಚಾರದ ನಾಗರಾಜ್ ಸಾಣೇಹಳ್ಳಿ, ವಿದ್ಯಾರ್ಥಿ ಗಳಾದ ಸುಪ್ರಭೆ, ಮುಕ್ತಾ ಸಾಮೂಹಿಕ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಿವಮಂತ್ರ ಲೇಖನ ಬರೆಯಲಾಯಿತು. ಅಧ್ಯಾಪಕ ಸಂತೋಷ್ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.