ADVERTISEMENT

ಪಿಎಂಶ್ರೀ ಶಾಲೆ ಪ್ರವೇಶಾತಿಗೆ ಹೆಚ್ಚಿದ ಬೇಡಿಕೆ

ಮಧ್ಯರಾತ್ರಿಯಿಂದಲೇ ಸರದಿ ಕುಳಿತ ಪಾಲಕರು

​ಪ್ರಜಾವಾಣಿ ವಾರ್ತೆ
Published 31 ಮೇ 2025, 6:04 IST
Last Updated 31 ಮೇ 2025, 6:04 IST
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಪಿಎಂಶ್ರೀ ಶಾಲೆ ಪ್ರವೇಶಾತಿ ಪಡೆಯಲು ಶುಕ್ರವಾರ ಸರದಿಯಲ್ಲಿ ಕುಳಿತಿರುವ ಪಾಲಕರು
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಪಿಎಂಶ್ರೀ ಶಾಲೆ ಪ್ರವೇಶಾತಿ ಪಡೆಯಲು ಶುಕ್ರವಾರ ಸರದಿಯಲ್ಲಿ ಕುಳಿತಿರುವ ಪಾಲಕರು   

ಮೊಳಕಾಲ್ಮುರು: ಕಳೆದ ವರ್ಷದಿಂದ ಅರಂಭವಾಗಿರುವ ಪಿಎಂಶ್ರೀ (ಪ್ರಧಾನಮಂತ್ರಿ ಸ್ಕೂಲ್ಸ್‌ ಫಾರ್‌ ರೈಸಿಂಗ್ ಇಂಡಿಯಾ)‌ ಶಾಲೆಗಳ ಪ್ರವೇಶಾತಿಗೆ ತಾಲ್ಲೂಕಿನಲ್ಲಿ ಭಾರಿ ಬೇಡಿಕೆ ಉಂಟಾಗಿದ್ದು, ಪ್ರವೇಶಾತಿ ಸಿಗದಿರುವುದು ನೂರಾರು ಪಾಲಕರ ಬೇಸರಕ್ಕೂ ಕಾರಣವಾಗಿದೆ.

ಇದು ಇಂಗ್ಲಿಷ್‌ ಮಾಧ್ಯಮ ಶಾಲೆಯಾಗಿದ್ದು, ಎಲ್‌ಕೆಜಿಯಿಂದ ಪ್ರವೇಶಾತಿಗೆ ಅವಕಾಶ ನೀಡಲಾಗಿದೆ. ತಾಲ್ಲೂಕಿನ ಕೊಂಡ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಳಕಾಲ್ಮುರಿನ ಕ್ಷೇತ್ರ ಮಾದರಿ ಬಾಲಕಿಯ ಪ್ರಾಥಮಿಕ ಶಾಲೆ ಮತ್ತು ಕೋನಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ‘ಪಿಎಂಶ್ರೀ’ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರತಿ ಶಾಲೆಯಲ್ಲಿ 30 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿಗೆ ಅವಕಾಶ ನೀಡಲಾಗಿದೆ.

ಶಾಲೆಗಳು ಪುನರಾರಂಭವಾಗಿದ್ದು ಪ್ರವೇಶಕ್ಕೆ ಅರ್ಜಿ ವಿತರಿಸಲಾಗುವುದು. ಮೊದಲು ಬಂದವರಿಗೆ ಆದ್ಯತೆ ಎಂದು ಇಲಾಖೆ ಹೇಳಿದ್ದ ಕಾರಣ ಪಾಲಕರು ಅರ್ಜಿಗಳಿಗೆ ಮುಗಿಬಿದ್ದಿದ್ದಾರೆ. ಕೊಂಡ್ಲಹಳ್ಳಿಯ ಶಾಲೆಯಲ್ಲಿ ಅರ್ಜಿ ಪಡೆಯಲು ಮಧ್ಯರಾತ್ರಿ 3 ಗಂಟೆಯಿಂದ ಸರದಿಯಲ್ಲಿ ಕಾದಿದ್ದಾರೆ. 75ಕ್ಕೂ ಹೆಚ್ಚು ಪಾಲಕರು ಅರ್ಜಿಗಾಗಿ ಬಂದಿದ್ದು, ಮೊದಲು ಬಂದ 30 ಜನರಿಗೆ ಮಾತ್ರ ಅರ್ಜಿ ವಿತರಿಸಲಾಯಿತು ಎಂದು ಮುಖ್ಯಶಿಕ್ಷಕ ಮಲ್ಲೇಶಪ್ಪ ಮಾಹಿತಿ ನೀಡಿದರು.

ADVERTISEMENT

ಸರ್ಕಾರ ಈ ಶಾಲೆಗಳಲ್ಲಿ 30 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿ ನಿಗದಿಪಡಿಸಿರುವುದು ಬೇಡಿಕೆಗೆ ಒತ್ತು ನೀಡಿದೆ. ಸಂಖ್ಯೆಯನ್ನು 50ಕ್ಕೆ ಹೆಚ್ಚಳ ಮಾಡಿದರೆ ಅನುಕೂಲವಾಗುತ್ತಿತ್ತು. ಅತಿಥಿ ಶಿಕ್ಷಕರನ್ನು ಬಳಸಿಕೊಂಡು ಬೋಧನೆ ಮಾಡಿಸಲಾಗುತ್ತಿದೆ. ಕೊಂಡ್ಲಹಳ್ಳಿ ದೊಡ್ಡ ಗ್ರಾಮವಾಗಿದ್ದು, ಸಂಖ್ಯೆ ಹೆಚ್ಚಳ ಮಾಡಿಕೊಟ್ಟಲ್ಲಿ ಅನುಕೂಲವಾಗಲಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್‌ ಮನವಿ ಮಾಡಿದರು.

ಕಳೆದ ವರ್ಷ ರಾಂಪುರ ಗಡ್ಡೆ ವೀರಭದ್ರಪ್ಪ ಶಾಲೆ, ಕೋನಸಾಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಆರಂಭಿಸಲಾಗಿತ್ತು. ಈ ವರ್ಷ ಹೊಸದಾಗಿ ಕೆಪಿಎಸ್‌ ಬಿ.ಜಿ.ಕೆರೆ, ನಾಗಸಮುದ್ರ, ಚಿಕ್ಕುಂತಿ ಶಾಲೆಗಳಲ್ಲಿಯೂ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಪಾಲಕರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಎಲ್ಲಾ 12 ಕ್ಲಸ್ಟರ್‌ಗಳಲ್ಲಿ ಪ್ರತಿ ಕ್ಲಸ್ಟರ್‌ಗೆ ಒಂದರಂತೆ ಎಲ್‌ಕೆಜಿ, ಯುಕೆಜಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವಂತೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಪ್ರತಿಕ್ರಿಯೆ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಮನ್ವಯ ಶಿಕ್ಷಣಾಧಿಕಾರಿ ಕೆ. ತಿಪ್ಪೇಸ್ವಾಮಿ ಹೇಳಿದರು.

ಕಳೆದ ವರ್ಷ ತಾಲ್ಲೂಕಿನಲ್ಲಿ 2,900 ವಿದ್ಯಾರ್ಥಿಗಳು ಪ್ರಥಮ ವರ್ಷಕ್ಕೆ ದಾಖಲಾತಿ ಆಗಿದ್ದರು, ಈ ವರ್ಷ ಶೇ 10 ರಷ್ಟು ಹೆಚ್ಚು ಮಕ್ಕಳನ್ನು ದಾಖಲು ಮಾಡಿಕೊಳ್ಳಬೇಕು ಎಂಬ ಗುರಿ ಹೊಂದಲಾಗಿದೆ. ಎಲ್ಲಾ ಕಡೆ ಉತ್ತಮ ದಾಖಲಾತಿ ಪ್ರಕ್ರಿಯೆ ನಡೆದಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.