ಚಿಕ್ಕಜಾಜೂರು: ಸಮೀಪದ ಕಡೂರು ಬೆಟ್ಟದ ಮೇಲಿನ ಕೋಡಗಲ್ಲಿಗೆ ಭಾನುವಾರ ನೂರಾರು ಭಕ್ತರು ಮಂಡಕ್ಕಿ ಸೇವೆ ಸಲ್ಲಿಸಿ, ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿ ವರ್ಷ ಮಹಾನವಮಿಯಂದು ಬೆಟ್ಟದ ಮೇಲಿನ ಕೋಡಗಲ್ಲಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಭಕ್ತರು ಬೆಳಿಗ್ಗೆಯಿಂದಲೇ ತಂಡೋಪ ತಂಡವಾಗಿ ಬಂದು ಹರಕೆ ಸಲ್ಲಿಸುತ್ತಿದ್ದುದು ಕಂಡು ಬಂದಿತು.
ಹರಕೆ: ಪ್ರತಿ ವರ್ಷ ನಡೆಯುವ ಗೋಡಗಲ್ಲು ವಿಶೇಷ ಪೂಜೆಗೆ ದೇವಸ್ಥಾನ ಸಮಿತಿ ಹಾಗೂ ಭಕ್ತರು ಮಂಡಕ್ಕಿಯನ್ನು ಸಮರ್ಪಿಸುವುದು ವಾಡಿಕೆ.
ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ನೂರಾರು ಭಕ್ತರು ಮಕ್ಕಳ ಮದುವೆ, ವ್ಯಾಪಾರ, ಸಮೃದ್ಧ ಮಳೆ, ಬೆಳೆ, ಮತ್ತಿತರ ಮಂಗಳ ಕಾರ್ಯಗಳು ಈಡೇರುವಂತೆ ಕೋಡಗಲ್ಲು ಹಾಗೂ ವೀರಭದ್ರ ಸ್ವಾಮಿಗೆ ಹರಕೆ ಹೊತ್ತುಕೊಂಡಿರುತ್ತಾರೆ. ಅವರ ಹರಕೆಗಳು ತೀರಿದಾಗ ತಮ್ಮ ಇಚ್ಛಾನುಸಾರ ಮಂಡಕ್ಕಿ, ಬೆಲ್ಲವನ್ನು ಗೋಡಗಲ್ಲಿಗೆ, ದವಸ ಧಾನ್ಯಗಳನ್ನು ದೇವಸ್ಥಾನಕ್ಕೆ ಅರ್ಪಿಸುತ್ತಾರೆ.
ಸುಮಾರು 450 ಚೀಲಗಳಿಗೂ ಹೆಚ್ಚು ಮಂಡಕ್ಕಿಯನ್ನು ತಂದು ರಾಶಿ ಹಾಕಲಾಗಿತ್ತು. ಕೋಡಗಲ್ಲಿಗೆ ಮಂಗಳಾರತಿ ಮಾಡಿದ ನಂತರ ಮಂಡಕ್ಕಿಯನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.