ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಕರಣಗೊಂಡಿದ್ದು, ಸಾಹಿತ್ಯದ ಗಂಧವೇ ಗೊತ್ತಿಲ್ಲದವರು ಪರಿಷತ್ ಸೇರುತ್ತಿದ್ದಾರೆ. ನಿಜವಾದ ಸಾಹಿತಿಗಳು ಸೇರಿ ಸಾಹಿತ್ಯದ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ.ವಿರೇಂದ್ರಕುಮಾರ್ ಅಭಿಪ್ರಾಯಪಟ್ಟರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜ ತುಂಬಾ ವಿಷಮ ಸ್ಥಿತಿಯತ್ತ ಸಾಗುತ್ತಿದೆ. ಸಂವೇದನಾಶೀಲತೆ ಸತ್ತು ಹೋಗಿದೆ. ಪ್ರೀತಿ–ಪ್ರೇಮ ಸಂಬಂಧ ಸಡಿಲಗೊಂಡಿವೆ. ಆಕ್ರೋಶ, ದ್ವೇಷಪೂರಿತ ವಾತಾವರಣ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಮಾತ್ರ ಜನರಿಗೆ ಆಸರೆಯಾಗಬಲ್ಲದು’ ಎಂದು ಹೇಳಿದರು.
‘ಸಾಹಿತ್ಯ ಪರಿಷತ್ತಿಗೆ ಘನತೆ ಇದೆ. ಇದನ್ನು ಕಾಪಾಡುವ ಹೊಣೆ ಪ್ರತಿಯೊಬ್ಬರ ಮೇಲಿದೆ. ಪರಿಷತ್ತಿಗೆ ಸಾಂಸ್ಕೃತಿಕ ಘನತೆ ತಂದುಕೊಡುವ ಅಗತ್ಯವಿದೆ. ಚುನಾವಣೆಯಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ’ ಎಂದು ಹೇಳಿದರು.
‘ಆರೋಗ್ಯಕರ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವ ಸಾಮರ್ಥ್ಯ ದೊಡ್ಡಮಲ್ಲಯ್ಯ ಅವರಲ್ಲಿದೆ. ಸಾಮಾಜಿಕ ನ್ಯಾಯದ ಸೂಕ್ಷ್ಮತೆ ಅವರಿಗೆ ಗೊತ್ತಿದೆ. ಸಾಹಿತ್ಯದ ಘನತೆ ಕುಂದಿಸಲ್ಲ ಎಂಬ ವಿಶ್ವಾಸವಿದೆ. ಅವರು ಸೂಕ್ತ ಅಭ್ಯರ್ಥಿ ಆಗಬಲ್ಲರು’ ಎಂದರು.
ಪುನರಾಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಶಿವಕುಮಾರ್, ಸೋಮಶೇಖರ್, ಷರೀಫಾ ಬಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.