ADVERTISEMENT

ಗಣಿಗಾರಿಕೆಗೆ ತಣಿಗೆಹಳ್ಳಿ ಗ್ರಾಮಸ್ಥರ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 15:40 IST
Last Updated 29 ಜುಲೈ 2021, 15:40 IST
ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಗಣಿಭಾದಿತ ಪ್ರದೇಶ ತಣಿಗೆಹಳ್ಳಿಯಲ್ಲಿ ಪರಿಸರ ಹಾನಿ ಆಗುತ್ತಿರುವುದನ್ನು ವಿರೋಧಿಸಿ ಬಂಜಾರ (ಲಂಬಾಣಿ) ಸಮಾಜದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಗಣಿಭಾದಿತ ಪ್ರದೇಶ ತಣಿಗೆಹಳ್ಳಿಯಲ್ಲಿ ಪರಿಸರ ಹಾನಿ ಆಗುತ್ತಿರುವುದನ್ನು ವಿರೋಧಿಸಿ ಬಂಜಾರ (ಲಂಬಾಣಿ) ಸಮಾಜದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕು ತಣಿಗೆಹಳ್ಳಿ ಗ್ರಾಮದ ಸಮೀಪ ನಡೆಯುತ್ತಿರುವ ಗಣಿಗಾರಿಕೆಯಿಂದ ಜನರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಬಂಜಾರ (ಲಂಬಾಣಿ) ಸಮಾಜ ಕರ್ನಾಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಮ ಗಣಿಭಾದಿತ ಪ್ರದೇಶ ಆಗಿದ್ದು, ಇಲ್ಲಿ ಉಂಟಾಗಿರುವ ಹಾನಿಗೆ ಈವರೆಗೂ ಯಾವುದೇ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತೊಂದರೆಗೆ ಒಳಗಾದ ಸಂತ್ರಸ್ತರಿಗೆ ನೆರವು ಒದಗಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮೂರು ದಶಕಗಳಿಂದ ಇಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದಾಗಿ ರಾಗಿ, ಜೋಳ, ನವಣೆ, ಹತ್ತಿ, ಅವರೆ, ತೊಗರಿ, ಅಲಸಂದೆ, ಸಜ್ಜೆ, ಎಳ್ಳು ಇತರ ಬೆಳೆಗಳು ಗಣಿ ಧೂಳಿನಿಂದ ಹಾನಿಗೆ ಒಳಗಾಗುತ್ತಲೇ ಇವೆ. ಈ ಕಾರಣದಿಂದಾಗಿ ಮೆಕ್ಕೆಜೋಳ, ರಾಗಿ ಮಾತ್ರ ಇಲ್ಲಿ ಬೆಳೆಯಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ADVERTISEMENT

ಹಳ್ಳದಲ್ಲಿ ಕಲುಷಿತ ನೀರು ಹರಿದು ಬರುತ್ತಿದ್ದು, ಜನ-ಜಾನುವಾರುಗಳು ಕುಡಿಯಲು ಯೋಗ್ಯವಾಗಿಲ್ಲ. ಗಣಿಗಾರಿಕೆಯಿಂದ ಅಂರ್ತಜಲ ಬತ್ತಿ ಹೋಗಿದೆ. ಜನರ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಗಣಿಗಾರಿಕೆ ಕಾರಣಕ್ಕೆ ಸಿಡಿಮದ್ದು ಸಿಡಿಸುವುದರಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಕೊಳವೆ ಬಾವಿಗಳ ಮೋಟಾರ್ ಪಂಪ್‌ಗಳು ಕಳಚಿ ಬಿದ್ದಿವೆ. ರೈತರು ಇದರಿಂದ ಕಂಗಾಲಾಗಿದ್ದಾರೆ ಎಂದು ದೂರಿದರು.

ಸಮಾಜದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಸವಿತಾ ಬಾಯಿ, ರಾಜ್ಯ ಅಧ್ಯಕ್ಷ ಎಂ.ಸತೀಶ್‌ಕುಮಾರ್ ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಟಿ.ಆರ್.ಗೋವಿಂದನಾಯ್ಕ, ಕೆ.ಸುರೇಶ, ಟಿ.ಜಿ.ಹಾಲಪ್ಪ, ಟಿ.ಶೇಖರ್, ಟಿ.ಆರ್.ಉಮಾಪತಿ, ಟಿ.ಆರ್.ಕುಮಾರಸ್ವಾಮಿ, ಟಿ.ಆರ್.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.