ಸಿರಿಗೆರೆ: ತಡರಾತ್ರಿ ಅರ್ಧ ಗಂಟೆ ಸುರಿದ ಮಳೆಗೆ ಸಿರಿಗೆರೆ ಸಮೀಪದ ಸೀಗೇಹಳ್ಳಿ ಗ್ರಾಮದಲ್ಲಿ ಮಂಜುನಾಥ್ ಅವರ ಜಮೀನಿಗೆ ಹೊಂದಿಕೊಂಡಿರುವ ಚೆಕ್ಡ್ಯಾಂ ತುಂಬಿ ಹರಿದಿದೆ.
10 ಅಡಿ ಆಳ, 85 ಅಡಿ ವಿಸ್ತೀರ್ಣವಿರುವ ಚೆಕ್ಡ್ಯಾಂ ಈ ಹಿಂದೆ ಮಳೆಗಾಲದ ಸಮಯದಲ್ಲಿ ತುಂಬಿ ಹರಿದ ಕಾರಣ ಗ್ರಾಮದ ಹಿರಿಯರು ಮತ್ತು ಮುತ್ತೈದೆಯರು ಸ್ಥಳದಲ್ಲಿ ಗ್ರಾಮ ದೇವತೆಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದರು.
ರಾತ್ರಿ ಸುರಿದ ಮಳೆಯಿಂದ ಕೆಲವು ರೈತರ ಮೆಕ್ಕೆಜೋಳದ ರಾಶಿ ನೆನೆದು ಹಾಳಾದರೆ; ಅಡಿಕೆ, ತೆಂಗು ತೋಟಗಳಿಗೆ ಹದ ಮಳೆಯಾಗಿದೆ.
ಒಂದೇ ದಿನದಲ್ಲಿ ಚೆಕ್ಡ್ಯಾಂ ತುಂಬಿರುವುದಕ್ಕೆ ಸುತ್ತಮುತ್ತಲ ಜಮೀನಿನ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಚೆಕ್ಡ್ಯಾಂನಲ್ಲಿ ನೀರು ಸಂಗ್ರಹವಾದರೆ ಅಂತರ್ಜಲ ಹೆಚ್ಚಾಗಿ ಸುಮಾರು ಹತ್ತು ಕಿ.ಮೀ. ದೂರದವರೆಗೂ ಬೋರ್ವೆಲ್ಗಳಲ್ಲಿ ನೀರು ಬರುತ್ತದೆ ಎನ್ನುವುದು ರೈತರ ಅಭಿಪ್ರಾಯ.
ಪಳಿಕೇಹಳ್ಳಿ ಮತ್ತು ಅಳಗವಾಡಿ ಗ್ರಾಮದ ಸಮೀಪವಿರುವ ಬೆಟ್ಟದ ಪ್ರದೇಶಕ್ಕೆ ಹೆಚ್ಚು ಮಳೆ ಸುರಿದರೆ ಚೆಕ್ಡ್ಯಾಂ ತುಂಬಿ ಹರಿಯುತ್ತದೆ. ಈ ನೀರು ಚೆಕ್ಡ್ಯಾಂನಿಂದ ಶಾಂತಿವನದ ಚೆಕ್ಡ್ಯಾಂ ಮೂಲಕ ಭರಮಸಾಗರ ಕೆರೆ ಸೇರುತ್ತದೆ.
ಹೊಸರಂಗಾಪುರ, ಹಳವುದರ, ಜಮ್ಮೇನಹಳ್ಳಿ, ಚಿಕ್ಕೇನಹಳ್ಳಿ, ಸೀಗೇಹಳ್ಳಿ, ಓಬವ್ವನಾಗ್ತಿಹಳ್ಳಿ, ದೊಡ್ಡಾಲಘಟ್ಟ, ಕೋಣನೂರು, ಕಡ್ಲೆಗುದ್ದು, ಹನುಮನಹಳ್ಳಿ, ಪುಡಕಲಹಳ್ಳಿ, ಡಿ.ಮೆದಕೇರಿಪುರ, ಅರಭಗಟ್ಟ ಪ್ರದೇಶಗಳಲ್ಲಿಯೂ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.