ADVERTISEMENT

ಮಳೆಗೆ ಕುಸಿದ ಶಾಲಾ ಕಟ್ಟಡ

ದಂಡಿನ ಕುರುಬರಹಟ್ಟಿಯಲ್ಲಿ ಘಟನೆ, ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 12:35 IST
Last Updated 2 ಜೂನ್ 2020, 12:35 IST
ಚಿತ್ರದುರ್ಗ ತಾಲ್ಲೂಕಿನ ದಂಡಿನ ಕುರುಬರಹಟ್ಟಿಯ ಸರ್ಕಾರಿ ಶಾಲೆಯ ಕಟ್ಟಡ ಕುಸಿದಿದೆ.
ಚಿತ್ರದುರ್ಗ ತಾಲ್ಲೂಕಿನ ದಂಡಿನ ಕುರುಬರಹಟ್ಟಿಯ ಸರ್ಕಾರಿ ಶಾಲೆಯ ಕಟ್ಟಡ ಕುಸಿದಿದೆ.   

ಚಿತ್ರದುರ್ಗ: ತಾಲ್ಲೂಕಿನ ದಂಡಿನ ಕುರುಬರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಮಳೆಗೆ ಕುಸಿದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಸಂಭವನೀಯ ಅನಾಹುತವೊಂದು ತಪ್ಪಿದೆ.

ರಾತ್ರಿ ಬಿರುಗಾಳಿ ಸಹಿತ ಆರಂಭವಾದ ಮಳೆ ಅಲ್ಲಲ್ಲಿ ಜೋರಾಗಿ ಸುರಿದಿದೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದ ಕೊಠಡಿಯೊಂದರ ಗೋಡೆ ಕುಸಿದು ಬಿದ್ದಿದೆ. ಇದರಿಂದ ಚಾವಣಿ ಕೂಡ ನೆಲಕ್ಕೆ ಉರುಳಿದೆ.

1954ರ ಅ.1ರಂದು ನಿರ್ಮಾಣವಾಗಿದ್ದ ಕಟ್ಟಡ ಹಲವು ದಿನಗಳಿಂದ ಶಿಥಿಲಗೊಂಡಿತ್ತು. ಮಳೆಗಾಲದಲ್ಲಿ ಚಾವಣಿಯಿಂದ ನೀರು ಸೋರುತ್ತಿತ್ತು. ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ಮಂಜೂರು ಮಾಡುವಂತೆ ಗ್ರಾಮಸ್ಥರು ಹಲವು ದಿನಗಳಿಂದ ಶಿಕ್ಷಣ ಇಲಾಖೆಯನ್ನು ಕೋರಿದ್ದರು. ಕಟ್ಟಡಕ್ಕೆ ಮಂಜೂರಾತಿ ಸಿಕ್ಕರೂ ಕಾಮಗಾರಿ ಆರಂಭವಾಗಿರಲಿಲ್ಲ.

ADVERTISEMENT

1ರಿಂದ 8ನೇ ತರಗತಿವರೆಗಿನ ಶಾಲೆಯಲ್ಲಿ 84 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮಸ್ಥರೇ ಮುತುವರ್ಜಿ ವಹಿಸಿ ಆರಂಭಿಸಿದ ಎಲ್‌ಕೆಜಿ, ಯುಕೆಜಿ ಮಕ್ಕಳು ಸೇರಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿದ್ದಾರೆ. ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿ ಪ್ರಹ್ಲಾದ್‌ ಎಂಬುವರು ಬಿಸಿಯೂಟ ಸೇವನೆಗೆ ಪ್ರತ್ಯೇಕ ಕಟ್ಟಡ ನಿರ್ಮಿಸುತ್ತಿದ್ದಾರೆ. ಶಾಲೆ ಪ್ರವೇಶಾತಿ ಈ ವರ್ಷ ಹೆಚ್ಚಾಗುವ ಸಾಧ್ಯತೆ ಇದೆ.

ಐನಹಳ್ಳಿ: 38 ಮಿ.ಮೀ ಮಳೆ

ಚಿತ್ರದುರ್ಗ ತಾಲ್ಲೂಕಿನ ಐನಹಳ್ಳಿಯಲ್ಲಿ 38 ಮಿ.ಮೀ. ಮಳೆಯಾಗಿದೆ. ಜೂನ್‌ 1ರಂದು ಜಿಲ್ಲೆಯಲ್ಲಿ ದಾಖಲಾದ ಅತಿ ಹೆಚ್ಚು ಮಳೆ ಇದಾಗಿದೆ.

ಭರಮಸಾಗರದಲ್ಲಿ 12 ಮಿ.ಮೀ, ತುರುವನೂರು ವ್ಯಾಪ್ತಿಯಲ್ಲಿ 16 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ 20 ಮಿ.ಮೀ, ಪರಶುರಾಂಪುರ 9, ತಳುಕು 29 ಮಿ.ಮೀ ಮಳೆ ಸುರಿದಿದೆ. ಹಿರಿಯೂರು ತಾಲ್ಲೂಕಿನ ಬಬ್ಬೂರು, ಈಶ್ವರಗೆರೆ ಸುತ್ತ 17 ಮಿ.ಮೀ. ಹೊಳಲ್ಕೆರೆ, ಹೊಸದುರ್ಗ ತಾಲ್ಲೂಕು ವ್ಯಾಪ್ತಿಯಯಲ್ಲಿ ತಲಾ 8 ಮಿ.ಮೀ ಹಾಗೂ ಮೊಳಕಾಲ್ಮೂರು ಪಟ್ಟಣ ವ್ಯಾಪ್ತಿಯಲ್ಲಿ 22ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.