ADVERTISEMENT

ಚಿತ್ರದುರ್ಗ: ಬಾಲಕಿ ಅಪಹರಿಸಿ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 19:35 IST
Last Updated 21 ಡಿಸೆಂಬರ್ 2019, 19:35 IST

ಚಿತ್ರದುರ್ಗ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ದುಷ್ಕರ್ಮಿಯೊಬ್ಬ ಸಂತ್ರಸ್ತೆಯನ್ನು ಆಂಧ್ರಪ್ರದೇಶದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಅತ್ಯಾಚಾರದಿಂದ ಅಸ್ವಸ್ಥಗೊಂಡ 16 ವರ್ಷದ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನ ಸೋಮಲಾಪುರದ ಹರೀಶ (21) ಎಂಬಾತನನ್ನು ರಾಂಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೊಳಕಾಲ್ಮುರು ತಾಲ್ಲೂಕಿನ ಗಡಿಗ್ರಾಮದ ಬಾಲಕಿ ಹಾಗೂ ಆರೋಪಿ ಹರೀಶ ಪರಿಚಯಸ್ಥರು. ಮದುವೆ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಡಿ.17ರಂದು ಸಂಜೆ ಬಹಿರ್ದೆಸೆಗೆ ತೆರಳಿದ ಬಾಲಕಿಯನ್ನು ಆರೋಪಿ ಅಪಹರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆಂಧ್ರಪ್ರದೇಶದ ಹಡಗಲಿ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ರೈಲ್ವೆ ಕೆಳ ಸೇತುವೆ ಸಮೀಪ ನಗ್ನಳಾಗಿ ಪ್ರಜ್ಞೆತಪ್ಪಿದ ಬಾಲಕಿಯನ್ನು ಕುಟುಂಬದ ಸದಸ್ಯರು ಪತ್ತೆಮಾಡಿ ಶ್ರೀರಾಂಪುರ ಆಸ್ಪತ್ರೆಗೆ ದಾಖಲಿಸಿದ್ದರು. ಅತ್ಯಾಚಾರ ನಡೆದ ಸಂಗತಿಯನ್ನು ವೈದ್ಯರಿಂದ ಮುಚ್ಚಿಟ್ಟಿದ್ದರು.

ಆರೋಪಿಯನ್ನು ಪತ್ತೆ ಮಾಡಿದ ಸಂತ್ರಸ್ತೆಯ ಕುಟುಂಬದ ಸದಸ್ಯರು ಬಾಲಕಿಯನ್ನು ವಿವಾಹವಾಗುವಂತೆ ಮನವಿ ಮಾಡಿದ್ದಾರೆ. ಆರಂಭದಲ್ಲಿ ಇದಕ್ಕೆ ಸಮ್ಮತಿ ಸೂಚಿಸಿದ್ದ ಆರೋಪಿ ಬಳಿಕ ನಿರಾಕರಿಸಿದ್ದಾನೆ. ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿಗೆ ಕರೆ ಬಂದಿದೆ. ಜಿಲ್ಲಾ ಮಕ್ಕಳ ಘಟಕದ ಸದಸ್ಯರು ಸಂತ್ರಸ್ತೆಯನ್ನು ರಕ್ಷಿಸಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.