ADVERTISEMENT

ಮೀಸಲಾತಿ ಭಿಕ್ಷೆಯಲ್ಲ, ನಮ್ಮ ಹಕ್ಕು: ಸ್ವಾಮೀಜಿ

ಬಸವ ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 6:25 IST
Last Updated 4 ಫೆಬ್ರುವರಿ 2021, 6:25 IST
ಹಿರಿಯೂರು ತಾಲ್ಲೂಕಿನ ಬುರುಜನರೊಪ್ಪ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಪಾದಯಾತ್ರೆ ಬಹಿರಂಗ ಸಭೆಯಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.
ಹಿರಿಯೂರು ತಾಲ್ಲೂಕಿನ ಬುರುಜನರೊಪ್ಪ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಪಾದಯಾತ್ರೆ ಬಹಿರಂಗ ಸಭೆಯಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.   

ಹಿರಿಯೂರು: ‘ಪಂಚಮಸಾಲಿಗಳು ಸ್ವಾಭಿಮಾನದ ಬದುಕಿಗೆ ಹೆಸರಾದವರು. 50 ವರ್ಷಗಳಿಂದ ಪ್ರವರ್ಗ 2 ‘ಎ’ ಮೀಸಲಾತಿಗೆ ಹೋರಾಟ ನಡೆಸುತ್ತಿದ್ದೇವೆ. ಇದು ಭಿಕ್ಷೆಯಲ್ಲ. ನಮ್ಮ ಹಕ್ಕು’ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬುರುಜನರೊಪ್ಪ ಗ್ರಾಮದಲ್ಲಿ ಬುಧವಾರ ಸಂಜೆ ಪಂಚಮಸಾಲಿ ಸಮಾಜಕ್ಕೆ ‘ಪ್ರವರ್ಗ 2ಎ’ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕೂಡಲಸಂಗಮದಿಂದ ಬೆಂಗಳೂರಿನ ವಿಧಾನಸೌಧಕ್ಕೆ ಹೊರಟಿರುವ ಪಾದಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಸರ್ಕಾರದ ಸವಲತ್ತು ಪಡೆಯಲು, ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿರುವ ಪಂಚಮಸಾಲಿ ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಅಗತ್ಯವಿದೆ. ನಮ್ಮದು ಸತ್ಯದ ಹೋರಾಟ. ಹೀಗಾಗಿ ಜಯ ಖಚಿತ. ಸರ್ಕಾರ ನಮಗೆ ಭರವಸೆ ನೀಡಿದರೆ ಒಪ್ಪುವುದಿಲ್ಲ. ನಮ್ಮ ಬೇಡಿಕೆ ಗೆಜೆಟ್‌ನಲ್ಲಿ ಪ್ರಕಟವಾಗಬೇಕು. ದಾವಣಗೆರೆಯಿಂದ ಈ ಕಡೆಗೆ ನಮ್ಮ ಹೋರಾಟದ ಕೆಚ್ಚು ಹೆಚ್ಚಿದೆ’ ಎಂದು ಸ್ವಾಮೀಜಿ
ಹೇಳಿದರು.

ADVERTISEMENT

‘ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ನಮ್ಮ ಮಠಕ್ಕೆ ಅನುದಾನ ಬೇಡ. ಸಮಾಜದ ಉತ್ತಮ ಭವಿಷ್ಯಕ್ಕೆ ಮೀಸಲಾತಿ ಆದೇಶ ಮಾಡಿಸಿ. ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ ನಮ್ಮ ಸಮುದಾಯದವರು ಎಂಬುದು ಹೆಮ್ಮೆಯ ಸಂಗತಿ. ನಮ್ಮ ಹೋರಾಟವನ್ನು ಯಡಿಯೂರಪ್ಪ ಹಗುರವಾಗಿ ಪರಿಗಣಿಸಬಾರದು’ ಎಂದು ಸ್ವಾಮೀಜಿ
ಎಚ್ಚರಿಸಿದರು.

ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯ ಕಾಶೆಪ್ಪನವರ, ಶಾಸಕ ಬಂಡೆಪ್ಪ ಕಾಶೆಪ್ಪನವರ, ಎಂ.ಜಿ. ತಿಪ್ಪೇಸ್ವಾಮಿ, ನಾಗಣ್ಣ ಬೆಳಗೆರೆ, ಶಂಕರಪ್ಪ, ರವಿ ಅವರೂ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.