ADVERTISEMENT

ಶರಣ ಸಂಸ್ಕೃತಿ ಉತ್ಸವ: ರುದ್ರಾಕ್ಷಿ ಕಿರೀಟದೊಂದಿಗೆ ಶರಣರ ‘ಶೂನ್ಯ ಪೀಠಾರೋಹಣ’

ಹಿರಿಯ ಗುರುಗಳಾದ ಮುರುಗಿ ಶಾಂತವೀರ ಸ್ವಾಮೀಜಿ ಅವರ ಗದ್ದುಗೆಗೆ ಭಕ್ತಿ ಸಮರ್ಪಿಸಿದ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 11:29 IST
Last Updated 20 ಅಕ್ಟೋಬರ್ 2018, 11:29 IST
ಚಿತ್ರದುರ್ಗದಲ್ಲಿ ಶನಿವಾರ ಶಿವಮೂರ್ತಿ ಮುರುಘಾ ಶರಣರು ಭಕ್ತರ ಸಮ್ಮುಖದಲ್ಲಿ ‘ಶೂನ್ಯ ಪೀಠಾರೋಹಣ’ ಮಾಡಿದರು.
ಚಿತ್ರದುರ್ಗದಲ್ಲಿ ಶನಿವಾರ ಶಿವಮೂರ್ತಿ ಮುರುಘಾ ಶರಣರು ಭಕ್ತರ ಸಮ್ಮುಖದಲ್ಲಿ ‘ಶೂನ್ಯ ಪೀಠಾರೋಹಣ’ ಮಾಡಿದರು.   

ಚಿತ್ರದುರ್ಗ: ಕೋಟೆನಾಡಿನ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಇಲ್ಲಿನ ಮುರುಘಾಮಠದಲ್ಲಿ ಶನಿವಾರ ಶಿವಮೂರ್ತಿ ಮುರುಘಾ ಶರಣರು ನೂರಾರು ಬಸವ ಭಕ್ತರ ಸಮ್ಮುಖದಲ್ಲಿ ‘ಶೂನ್ಯ ಪೀಠಾರೋಹಣ’ ಮಾಡಿದರು.

ಶ್ರೀಮಠದ ಶೂನ್ಯಪೀಠ ಪರಂಪರೆಯಂತೆ ಪೀಠಾಧ್ಯಕ್ಷರಾದ ಶರಣರು ಮಠದ ಪ್ರಾಂಗಣದಲ್ಲಿರುವ ಹಿರಿಯ ಗುರುಗಳಾದ ಮುರುಗಿ ಶಾಂತವೀರ ಸ್ವಾಮೀಜಿ ಅವರ ಗದ್ದುಗೆಗೆ ಭಕ್ತಿ ಸಮರ್ಪಿಸಿದರು.

ಚಿನ್ನದ ಕಿರೀಟ ಸೇರಿ ಇತರೆ ಆಭರಣಗಳೆಲ್ಲವನ್ನೂ ಭಕ್ತರ ಕೈಗಿಟ್ಟರು. ನಂತರ ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿಯನ್ನು ಕೈಯಲ್ಲಿಡಿದರು. ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳು, ಸಾಧಕರು, ಭಕ್ತರು, ಉತ್ಸವ ಸಮಿತಿ ಸದಸ್ಯರು, ನೂರಾರು ಜನರ ವಚನ ಘೋಷಣೆಗಳೊಂದಿಗೆ ಪೀಠಾರೋಹಣ ಮಾಡಿದರು.

ADVERTISEMENT

ವೈಚಾರಿಕತೆಯಿಂದಲೇ ಗುರುತಿಸಿಕೊಂಡಿರುವ ಶೂನ್ಯ ಪೀಠಾರೋಹಣ ಅತ್ಯಂತ ಮಹತ್ವ ಪಡೆದುಕೊಂಡಿದೆ. ಶರಣರಿಗಿಂತ ಹಿಂದಿನ ಪೀಠಾಧ್ಯಕ್ಷರವರೆಗೂ ದಸರಾ ಆಚರಿಸಿ ರತ್ನ­ ಖಚಿತ ಸಿಂಹಾಸನದಲ್ಲಿ, ಚಿನ್ನದ ಕಿರೀಟ ತೊಟ್ಟು ಪಲ್ಲಕ್ಕಿಯಲ್ಲಿ ಕುಳಿತು ಉತ್ಸವ ನಡೆಸುತ್ತಿದ್ದರು.

ಶರಣರು ಪೀಠಾಧ್ಯಕ್ಷರಾಗಿ ವೈಚಾರಿಕ ಉತ್ಸವ ಆರಂಭಿಸಿದ ಮೇಲೆ ಈ ಸಂಪ್ರದಾಯಗಳನ್ನು ಕೈಬಿಟ್ಟರು. ಬದಲಿಗೆ ರುದ್ರಾಕ್ಷಿ ಕಿರೀಟ ಧರಿಸಿ ಪೀಠಾರೋಹಣ ಮಾಡುವಂತಹ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಪೀಠಾರೋಹಣ ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಶರಣರಿಗೆ ಫಲಪುಷ್ಪ ಕಾಣಿಕೆಗಳನ್ನು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.