ADVERTISEMENT

ಕುರಿ ತಳಿ ಅಭಿವೃದ್ಧಿ ಯೋಜನೆ: ರೈತರೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 16:35 IST
Last Updated 3 ಜನವರಿ 2019, 16:35 IST
ನಾಯಕನಹಟ್ಟಿ ಸಮೀಪದ ಕುದಾಪುರ ಕುರಿಸಂವರ್ದನೆ ಮತು ತರಬೇತಿ ಕೇಂದ್ರದಲ್ಲಿ ಗುರುವಾರ ಕುರಿ ಸಾಕಾಣಿಕೆ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಬಾರ್ಡ್ ಪ್ರಧಾನ ವ್ಯವಸ್ಥಾಪಕ ಡಾ.ಕೆ. ವಿಶ್ವನಾಥನ್ ಮಾತನಾಡಿದರು
ನಾಯಕನಹಟ್ಟಿ ಸಮೀಪದ ಕುದಾಪುರ ಕುರಿಸಂವರ್ದನೆ ಮತು ತರಬೇತಿ ಕೇಂದ್ರದಲ್ಲಿ ಗುರುವಾರ ಕುರಿ ಸಾಕಾಣಿಕೆ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಬಾರ್ಡ್ ಪ್ರಧಾನ ವ್ಯವಸ್ಥಾಪಕ ಡಾ.ಕೆ. ವಿಶ್ವನಾಥನ್ ಮಾತನಾಡಿದರು   

ನಾಯಕನಹಟ್ಟಿ: ದೇಶದ ಕಟ್ಟಕಡೆಯ ಗ್ರಾಮದ ರೈತನು ಕೃಷಿಯಲ್ಲಿ ಸಮೃದ್ಧಿಯನ್ನು ಸಾಧಿಸುವಂತಾಗಬೇಕು ಎಂಬುದೇ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ಉದ್ದೇಶ ಎಂದು ಬೆಂಗಳೂರಿನ ನಬಾರ್ಡ್ ಪ್ರಧಾನ ವ್ಯವಸ್ಥಾಪಕ ಡಾ.ಕೆ. ವಿಶ್ವನಾಥನ್ ಹೇಳಿದರು.

ಸಮೀಪದ ಕುದಾಪುರ ಕುರಿಸಂವರ್ದನೆ ಮತ್ತು ತರಬೇತಿ ಕೇಂದ್ರದಲ್ಲಿ ಗುರುವಾರ ನಡೆದ ಹವಾಮಾನ ಬದಲಾವಣೆ ಯೋಜನೆಯಲ್ಲಿ ಸ್ಥಳೀಯ ಬಳ್ಳಾರಿ ಕುರಿತಳಿ ಅಭಿವೃದ್ಧಿ ಯೋಜನೆಯ ಪರಿಶೀಲನೆ ಮತ್ತು ಕುರಿ ಸಾಕಾಣಿಕೆ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ರಾಜಸ್ಥಾನದ ನಂತರ ಕರ್ನಾಟಕ ಅತೀ ಕಡಿಮೆ ಮಳೆ ಬೀಳುವ ಎರಡನೇ ರಾಜ್ಯವಾಗಿ ಪ್ರಸಕ್ತ ವರ್ಷ ಕಂಡು ಬಂದಿದೆ. ಅದರಲ್ಲೂ ಚಿತ್ರದುರ್ಗ ಜಿಲ್ಲೆ ಮಳೆಯಿಲ್ಲದೆ ನಿರಂತರವಾದ ಬರಗಾಲವನ್ನು ಎದುರಿಸುವಂತಾಗಿದೆ. ಇಲ್ಲಿನ ಅಲ್ಪ ಆದಾಯದಿಂದ ರೈತ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಿದೆ. ಅದಕ್ಕಾಗಿ ನಬಾರ್ಡ್ ಇಲ್ಲಿನ ರೈತರ ಹಿತಕಾಯಲು ಹೆಚ್ಚೆಚ್ಚು ಚಟುವಟಿಕೆ ಆಧಾರಿತ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಅದರಲ್ಲಿ ಜಲಾನಯನ ಯೋಜನೆ, ಪ್ರದೇಶಾಭಿವೃದ್ಧಿ, ಹವಾಮಾನ ಬದಲಾವಣೆ ಅಡಿಯಲ್ಲಿ ಸ್ಥಳೀಯ ತಳಿಗಳ ಸಂರಕ್ಷಣೆ ಯೋಜಗಳನ್ನು ಜಾರಿಗೆ ತಂದಿದೆ. ರೈತರು ಬಳ್ಳಾರಿ ಕುರಿ ತಳಿಯನ್ನು ಸಾಕಲು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯಗಳ ದೊರೆಯುತ್ತವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಮಾಲಿನಿ ಸುವರ್ಣಾ, ‘ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಲಾ ₹50ಲಕ್ಷ ವೆಚ್ಚದ 12ಕ್ಕೂ ಹೆಚ್ಚು ವಿವಿಧ ಯೋಜನಾ ಚಟುವಟಿಕೆ ನಡೆಯುತ್ತಿವೆ. ಇಲ್ಲಿನ ಕುರಿ ಸಂವರ್ದನಾ ಕೇಂದ್ರದಲ್ಲಿ 208 ಬಳ್ಳಾರಿ ಕುರಿ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಭಾಗದ ರೈತರು ಉಪಕಸುಬನ್ನಾಗಿ ಈ ತಳಿಯನ್ನು ಸಾಕುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಕಿವಿಮಾತು ಹೇಳಿದರು.

ಬಳ್ಳಾರಿ ಕುರಿತಳಿ ಸಾಕಾಣಿಕೆಗೆ ₹ 25 ಲಕ್ಷಕ್ಕೂ ಹೆಚ್ಚು ಸಾಲ ನೀಡಿದ ಮಲೂರಹಳ್ಳಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಕುದಾಪುರ ಕುರಿಸಂವರ್ದನೆ ಮತು ತರಬೇತಿ ಕೇಂದ್ರದ ಉಪನಿರ್ದೆಶಕ ಡಾ.ಜಿ. ತಿಪ್ಪೇಸ್ವಾಮಿ, ಆರ್ಥಿಕ ಸಲಹೆಗಾರ ಸಿದ್ದಲಿಂಗಪ್ಪ, ಬಸವರಾಜ್, ಪ್ರಗತಿಪರ ರೈತರಾದ ಧನಂಜಯ, ನವೀನ್, ಓಬಣ್ಣ, ಶೇಖರ್, ಭೀಮಣ್ಣ, ಗಗ್ಗಬೋರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.