ADVERTISEMENT

ಒಳಮೀಸಲಾತಿ; ಮಾದಿಗರಿಗೆ ನೈಜ ಸ್ವಾತಂತ್ರ್ಯ: ಎಚ್‌.ಆಂಜನೇಯ

ಒನಕೆ ಓಬವ್ವ ವೃತ್ತದಲ್ಲಿ ವಿಜಯೋತ್ಸವ ಆಚರಣೆ, ಚಳ್ಳಕೆರೆ ಗೇಟ್‌ನಿಂದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 7:22 IST
Last Updated 25 ಆಗಸ್ಟ್ 2025, 7:22 IST
ಒನಕೆ ಓಬವ್ವ ವೃತ್ತದಲ್ಲಿ ನಡೆದ ಮಾದಿಗರ ವಿಜಯೋತ್ಸವದಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದ ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಅವರನ್ನು ಮೇಲೆತ್ತಿ ಹೂವಿನ ಮಳೆ ಸುರಿಸಲಾಯಿತು
ಒನಕೆ ಓಬವ್ವ ವೃತ್ತದಲ್ಲಿ ನಡೆದ ಮಾದಿಗರ ವಿಜಯೋತ್ಸವದಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದ ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಅವರನ್ನು ಮೇಲೆತ್ತಿ ಹೂವಿನ ಮಳೆ ಸುರಿಸಲಾಯಿತು   

ಚಿತ್ರದುರ್ಗ: ‘ಒಳಮೀಸಲಾತಿ ಜಾರಿಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ಆ. 19ರಂದು ಒಳ ಮೀಸಲಾತಿ ಜಾರಿಗೊಳಿಸುವ ಸಂಬಂಧ ಸಚಿವ ಸಂಪುಟ ಸಭೆ ಅಂತಿಮ ನಿರ್ಣಯ ಕೈಗೊಂಡಿದೆ. ಅಂದು ನಿಜವಾದ ಅರ್ಥದಲ್ಲಿ ಮಾದಿಗ ಸಮುದಾಯಕ್ಕೆ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ತಿಳಿಸಿದರು.

ನಗರದ ಒನೆಕ ಓಬವ್ವ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ‘ಮಾದಿಗರ ವಿಜಯೋತ್ಸವ ಹಾಗೂ ಸಿಎಂ ಸಿದ್ದರಾಮಯ್ಯಗೆ ಕೃತಜ್ಞತೆ’ ಕಾಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಒಳಮೀಸಲಾತಿ ಹೋರಾಟ ಅತ್ಯಂತ ಸುಧೀರ್ಘವಾಗಿ ನಡೆದಿದೆ. ಸಾವಿರಾರು ಹೋರಾಟಗಾರರು 35 ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿದ್ದಾರೆ. ಸಹಸ್ರಾರು ಮಂದಿ ಮನೆ ತೊರೆದು ಚಳವಳಿ ನಡೆಸಿದ್ದಾರೆ. ಅನೇಕರು ಜೀವತೆತ್ತಿದ್ದಾರೆ. ಎಲ್ಲ ಪಕ್ಷಗಳ ಮುಖಂಡರು, ಇತರೆ ಸಮುದಾಯದವರು ಮಾದಿಗರ ಕುರಿತು ಮಮತೆ ತೋರಿದ್ದಾರೆ’ ಎಂದು ಹೇಳಿದರು.

ADVERTISEMENT

‘ಒಳ ಮೀಸಲಾತಿ ಜಾರಿಗೊಳಿಸುವ ಅವಕಾಶ ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಕ್ಕಿತು. ಈ ನಿಟ್ಟಿನಲ್ಲಿ ಅವರು ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ಬಸವ ಅನುಯಾಯಿಗಳಾದ ನಾವು ಶಾಂತಿ–ಸೌಹಾರ್ದದಿಂದ ಮೂರೂವರೆ ದಶಕ ಎಲ್ಲಾ ರೀತಿಯ ಹೋರಾಟ ನಡೆಸಿದೆವು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಒಳಮೀಸಲಾತಿ ಪರವಿದ್ದವು. ಆದರೆ, ಅದನ್ನು ಜಾರಿಗೊಳಿಸುವ ಅವಕಾಶ ಅವರಿಗೆ ದೊರೆಯಲಿಲ್ಲ. ಆದರೆ, ಭಾಗ್ಯಗಳ ಸರದಾರ ಸಿದ್ದರಾಮಯ್ಯ ಅವರಿಗೆ ಮಾದಿಗರಿಗೆ ನ್ಯಾಯ ಕಲ್ಪಿಸುವ ಸೌಭಾಗ್ಯ ದೊರೆಯಿತು. ಅದನ್ನು ಸಮರ್ಥವಾಗಿ ನಿರ್ವಹಿಸಿದರು’ ಎಂದು ಶ್ಲಾಘಿಸಿದರು.

‘ಇಲ್ಲಿಯವರೆಗೂ ಮಾದಿಗರು ಪರಿಶಿಷ್ಟ ಜಾತಿಯಲ್ಲಿ ಶೇ 1ರಷ್ಟು ಮೀಸಲಾತಿಯನ್ನೂ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಶೇ 6ರಷ್ಟು ಮೀಸಲಾತಿ ನೀಡಿ ನಮ್ಮ ಪ್ರಗತಿಗೆ ಸಹಕರಿಸಿದ್ದಾರೆ. ಕೊಟ್ಟ ಅವಕಾಶವನ್ನು ನಾವು ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು. ಉನ್ನತ ಶಿಕ್ಷಣ, ಉದ್ಯೋಗ, ಆರ್ಥಿಕ ನೆರವು ಪಡದು ಅಭಿವೃದ್ಧಿ ಸಾಧಿಸಬೇಕು’ ಎಂದು ತಿಳಿಸಿದರು.

ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ ‘1993ರಿಂದಲೂ ಒಳಮೀಸಲಾತಿ ಹೋರಾಟದಲ್ಲಿ ಎಚ್‌. ಆಂಜನೇಯ, ಕೆ.ಎಚ್. ಮುನಿಯಿಪ್ಪ ಮುಂಚೂಣಿಯಲಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಆಂಜನೇಯ ಅವರು ಬೀದಿ ಬೀದಿ ಸುತ್ತಿದ್ದಾರೆ. ಮುಖ್ಯಮಂತ್ರಿಗಳ ಮೇಲೆ  ನಿರಂತರ ಒತ್ತಡ ತಂದಿದ್ದಾರೆ. ಜೊತೆಗೆ ಅನೇಕ ಸಂಘಟನೆಗಳ ನಾಯಕರು, ಮುಖಂಡರ ಸೇವೆ ಸ್ಮರಣೀಯ’ ಎಂದರು.

ಬಿ.ತಿಪ್ಪೇಸ್ವಾಮಿ ಜೆಜೆ ಹಟ್ಟಿ ಮಾತನಾಡಿ ‘ಆರಂಭಿಕವಾಗಿ ನಾವು ದಿಢೀರನೇ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಮುಂದೆ ಎಲ್ಲ
ಪಕ್ಷಗಳಲ್ಲಿರುವ ಸಮುದಾಯದವರನ್ನು ಸೇರಿಸಿಕೊಂಡು ಬೃಹತ್ ವಿಜಯೋತ್ಸವ ಆಚರಿಸುವ ಮೂಲಕ ಸಂಭ್ರಮಿಸುತ್ತೇವೆ. ಒಳಮೀಸಲಾತಿ ಜಾರಿಗಾಗಿ ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಇನ್ನೂ ಕೆಲವರು ಮನೆ–ಸ್ವಂತ ಬದುಕು ಮರೆತು ನಿಸ್ವಾರ್ಥವಾಗಿ ಚಳವಳಿ ನಡೆಸಿದ್ದಾರೆ. ಅವರೆಲ್ಲರ ಶ್ರಮದ ಫಲ ಇಂದು ಸಿದ್ದರಾಮಯ್ಯ ನಮಗೆ ನ್ಯಾಯ ಕಲ್ಪಿಸಿಕೊಟ್ಟಿದ್ದಾರೆ’ ಎಂದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿ ‘ಮಾದಿಗರು ವಿವಿಧ ಸಂಘಟನೆಗಳ ಹೆಸರಲ್ಲಿ ಹಂಚಿಹೋಗಿದ್ದಾರೆ. ಸ್ವಪ್ರತಿಷ್ಠೆ, ಸ್ವಾರ್ಥ ತೊರೆದು ಮಾದಿಗ ಹೆಸರಿನಲ್ಲಿ ಒಗ್ಗೂಡಿದರೆ ಹಕ್ಕು ಪಡೆಯಲು ಸಾಧ್ಯ. ಸಿದ್ದರಾಮಯ್ಯ ಅವರ ಬದ್ಧತೆ ಪ್ರಶ್ನಾತೀತ’ ಎಂದರು.

ಲಿಡ್ಕರ್ ಮಾಜಿ ಅಧ್ಯಕ್ಷ ಒ. ಶಂಕರ್, ಜಿ.ಪಂ. ಮಾಜಿ ಸದಸ್ಯ ಆರ್.ನರಸಿಂಹರಾಜು, ಐನಹಳ್ಳಿ ಗ್ರಾ. ಪಂ. ಅಧ್ಯಕ್ಷ ಆರ್.ಉಮೇಶ್, ಮುಖಂಡರಾದ ಕುಂಚಿಗನಾಳ್ ಮಹಾಲಿಂಗಪ್ಪ, ಕೆ..ಮಲ್ಲೇಶ್, ಕೆ.ಟಿ..ಶಿವಕುಮಾರ್, ಕೆಂಗುಂಟೆ ಜಯ್ಯಪ್ಪ, ಡಿ..ಶಿವಣ್ಣ ಜೆಜೆ ಹಟ್ಟಿ, ಬೀರಾವರ ಪ್ರಕಾಶ್, ರಮೇಶ್ ಕೋಟಿ, ಪ್ರಸನ್ನ ಜಯಣ್ಣ, ಕಣ್ಮೇಶ್, ಎಂ.ಆರ್..ಶಿವರಾಜ್, ಅನಿಲ್ ಕೋಟಿ, ಚೇತನ್ ಬೋರೇನಹಳ್ಳಿ, ರವೀಂದ್ರ, ತಿಪ್ಪೇಸ್ವಾಮಿ ಇದ್ದರು.

ಮಾದಿಗ ಸಮುದಾಯದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಚಿವ ಎಚ್‌. ಆಂಜನೇಯ ಅವರಿಗೆ ಹಾಲಿನ ಅಭಿಷೇಕ ಮಾಡಿದರು
ಕಾಂಗ್ರೆಸ್ ಪಕ್ಷ ಸದಾ ನೊಂದವರ ಪರ ನಿರ್ಧಾರ ಕೈಗೊಳ್ಳುತ್ತದೆ ಎಂಬುದಕ್ಕೆ ಒಳಮೀಸಲಾತಿ ಜಾರಿ ವಿಷಯವೇ ಸಾಕ್ಷಿ. ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸೇರಿ ಎಲ್ಲರೂ ಬದ್ಧತೆ ಪ್ರದರ್ಶಿಸಿದ್ದಾರೆ
ಡಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ

ಭಾವಚಿತ್ರಗಳಿಗೆ ಹಾಲಿನ ಅಭಿಷೇಕ

ಮಾದಿಗರ ವಿಜಯೋತ್ಸವದ ಅಂಗವಾಗಿ ಸಮುದಾಯದ ಸದಸ್ಯರು ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರಗಳಿಗೆ ಹೂವು ಹಾಗೂ ಹಾಲಿನ ಅಭಿಷೇಕ ಮಾಡಿದರು. ಜೈ ಜೈ ಮಾದಿಗ ಜೈ ಅಂಬೇಡ್ಕರ್ ಜೈ ಸಿದ್ದರಾಮಯ್ಯ ಜೈ ಆಂಜನೇಯ ಘೋಷಣೆಗಳು ಮೊಳಗಿದವು.

ಚಳ್ಳಕೆರೆ ಗೇಟ್‌ನಿಂದ ಒನಕೆ ಒಬವ್ವ ವೃತ್ತದವರೆಗೆ ಮೆರವಣಿಗೆ ನೂರಾರು ಜನರು ಮೆರವಣಿಗೆ ನಡೆಸಿದರು. ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮೂಲಕ ಗೌರವ ಸಲ್ಲಿಸಲಾಯಿತು. ದಾರಿಯುದ್ದಕ್ಕೂ ಸಮುದಾಯದ ನಾಯಕರ ಮೇಲೆ ಹೂವಿನ ಸುರಿಮಳೆ ಸುರಿಸಿದರು. ತಮಟೆ ಕಲಾತಂಡಗಳು ಗಮನಸೆಳೆದವು. ಜನ್ಮದಿನ ಆಚರಣೆ: ಒಳಮೀಸಲಾತಿ ಜಾರಿಗೊಳ್ಳುವವರೆಗೂ ಹಬ್ಬ-ಹರಿದಿನ ಜನ್ಮದಿನ ಆಚರಿಸಿಕೊಳ್ಳುವುದಿಲ್ಲವೆಂದು ಆಂಜನೇಯ ಅವರು ಪ್ರತಿಜ್ಞೆ ಮಾಡಿದ್ದರು.  ಹೀಗಾಗಿ ಅವರ ಅಭಿಮಾನಿಗಳು ಬೃಹತ್ ಕೇಕ್ ಕತ್ತರಿಸಿ ದೊಡ್ಡ ಹಾರ ಅರ್ಪಿಸಿ ವಿಜಯೋತ್ಸವದಲ್ಲಿ ಜನ್ಮದಿನ ಆಚರಿಸಿದರು. 

ನಿದ್ದೆಗೆ ಜಾರುವುದು ಬೇಡ

‘ಮಾದಿಗರ ಹೋರಾಟ ಈಗ ಇನ್ನೊಂದು ಹಂತಕ್ಕೆ ತಲುಪಿದೆ. ಒಳಮೀಸಲಾತಿ ಜಾರಿಗೊಂಡಿತು ಎಂದು ನಾವೆಲ್ಲರೂ ನಿದ್ರೆಗೆ ಜಾರುವಂತಿಲ್ಲ. ಇನ್ನಷ್ಟು ಬೇಡಿಕೆಗಳಿಗಾಗಿ ಹೋರಾಟ ನಡೆಸಬೇಕು. ರಾಯಚೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಅವರಿಗೆ ಬೇಡಿಕೆಗಳ ಪಟ್ಟಿ ಸಲ್ಲಿಸಲಾಗುವುದು’ ಎಂದು ಎಚ್‌.ಆಂಜನೇಯ ತಿಳಿಸಿದರು. ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಸಿದ್ದರಾಮಯ್ಯ ಸಿಎಂ ಆಗಲು ಮಾದಿಗರ ಕೊಡುಗೆ ಇದೆ. ಅದೇ ರೀತಿ ನಮ್ಮ ಸಮಾಜಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಅವರನ್ನು ಗೌರವಿಸುವುದು ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ. ಇಡೀ ಸಚಿವ ಸಂಪುಟ ಕಾಂಗ್ರೆಸ್ ಪಕ್ಷ ಒಳಮೀಸಲಾತಿ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಿ ಜಾರಿಗೊಳಿಸುವಲ್ಲಿ ಶ್ರಮಿಸಿದೆ. ಜೊತೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೋರಾಟಗಾರರು ಹೀಗೆ ನಮಗೆ ನ್ಯಾಯ ಕೊಟ್ಟಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.