
ಚಿತ್ರದುರ್ಗ: ‘ಕಾಯಕ ಹಾಗೂ ದಾಸೋಹಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಶಿವಯೋಗಿ ಸಿದ್ದರಾಮೇಶ್ವರರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಚನಗಳ ಮೂಲಕ ಮೂಢನಂಬಿಕೆ, ಅಂಧಕಾರ ತೊಡೆಯಲು ಯತ್ನಿಸಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತದ ವತಿಯಿಂದ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಭಕ್ತಿ ಹಾಗೂ ಕಾಯಕದ ಮೂಲಕ ಸಮಾಜಮುಖಿ ಕಾರ್ಯಗಳನ್ನು ಸಿದ್ದರಾಮೇಶ್ವರರು ಕೈಗೊಂಡರು. ಬಸವಣ್ಣ, ಅಲ್ಲಮಪ್ರಭು ಅವರ ಅನುಭವ ಮಂಟಪದಲ್ಲಿ ಸಿದ್ದರಾಮೇಶ್ವರರು ಹಿರಿಯ ಶರಣರಾಗಿದ್ದರು. ಕಾಯಕಕ್ಕೆ ಮಹತ್ವ ನೀಡಿ, ಕೆರೆ– ಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತರ ಬದುಕು ಹಸನಾಗಲು ಶ್ರಮಿಸಿದರು. ಆಡು ಮಾತಿನಲ್ಲಿ, ಜನರ ಮನಸ್ಸಿಗೆ ನಾಟುವ ರೀತಿಯಲ್ಲಿ ವಚನ ರಚಿಸಿ ಅಂಕುಡೊಂಕು ತಿದ್ದಲೆತ್ನಿಸಿದರು’ ಎಂದು ಹೇಳಿದರು.
ಸಾಹಿತಿ ನಿರಂಜನ ದೇವರಮನೆ ಉಪನ್ಯಾಸ ನೀಡಿ, ‘ಇಡೀ ಮಾನವ ಕುಲಕ್ಕೆ ಉಪಯುಕ್ತ ಚಿಂತನೆಗಳನ್ನು, ಸದ್ಭಾವನೆಗಳನ್ನು ಹಾಗೂ ಸತ್ ಕ್ರಿಯೆಗಳನ್ನು ನೀಡಿದವರು ಸಿದ್ದರಾಮೇಶ್ವರರು. ಸಿದ್ದರಾಮೇಶ್ವರರ ಸ್ಮರಣೆ ಎಂದರೆ ನಮ್ಮ ಬದುಕಿನಲ್ಲಿ ಆಧ್ಯಾತ್ಮಿಕ ಸಂಪತ್ತು ಹಾಗೂ ಮೌಲ್ಯಗಳನ್ನು ಆರಾಧಿಸಿಕೊಂಡಂತೆ. ಸಿದ್ದರಾಮೇಶ್ವರರ ಪರಿಕಲ್ಪನೆಗಳು ಹಾಗೂ ಚಿಂತನೆಗಳು ಬಹು ವಿಶೇಷದಿಂದ ಕೂಡಿವೆ’ ಎಂದರು.
‘ಮಾನವೀಯತೆಯೇ ಶ್ರೇಷ್ಠ ಧರ್ಮ, ಶ್ರಮವೇ ನಿಜವಾದ ಭಕ್ತಿ ಎಂದು ಸಾರಿದ ಮಹಾನುಭಾವ ಸಿದ್ದರಾಮರು. ಅವರು ಕೇವಲ ವಚನಗಳನ್ನು ಬರೆಯಲಿಲ್ಲ, ವಚನಗಳಂತೆ ಬದುಕಿದವರು. ಸಿದ್ದರಾಮರು ನಿಜ ಶರಣರು. ಸಮಾಜವನ್ನು ಬದಲಿಸಲು ಪ್ರಯತ್ನಿಸಿದವರು. ಧರ್ಮವನ್ನು ಮಾನವೀಯ ನೆಲೆಯಲ್ಲಿ ಕಟ್ಟಿದವರು’ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ತಾಪಂ ಇಒ ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.