ಸಿರಿಗೆರೆ: ಇಲ್ಲಿನ ಸಿದ್ದಾಪುರ ಮತ್ತು ದೊಡ್ಡಿಗನಾಳ್ ಗ್ರಾಮಕ್ಕೆ ಯುಗಾದಿ ಹಬ್ಬಕ್ಕೆಂದು ಮಂಗಳವಾರ ಬಂದಿದ್ದ ಜನರನ್ನು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಕರ್ತ ಏಕಾಂತ್ ವಿಚಾರಣೆಗೊಳಪಡಿಸಿದರು.
‘ಕೊರೊನಾ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ವಿಚಾರಣೆಗೊಳಪಡಿಸಿದ್ದೇವೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಪ್ರಕಾಶ್ ಅವರು, ಸಿದ್ದಾಪುರ ಮತ್ತು ದೊಡ್ಡಿಗನಾಳ್ ಗ್ರಾಮಕ್ಕೆ ಕೇರಳ ಮತ್ತು ಬೆಂಗಳೂರಿನಿಂದ ಹಬ್ಬಕ್ಕೆಂದು ಬಂದಿರುವ ಜನರನ್ನು ಕಂಡು ಸಿರಿಗೆರೆ ಆರೋಗ್ಯ ಕೇಂದ್ರಕ್ಕೆ ತಕ್ಷಣವೇ ಮಾಹಿತಿ ನೀಡಿದರು. ನಾವು ಸ್ಥಳಕ್ಕೆ ಭೇಟಿ ನೀಡಿ ಸಿದ್ದಾಪುರದಲ್ಲಿ 11 ಜನ ಮತ್ತು ದೊಡ್ಡಿಗನಾಳ್ ಗ್ರಾಮದಲ್ಲಿ 22 ಜನ ಸ್ವಂತ ಊರಿಗೆ ಬಂದಿದ್ದಾರೆ. ಇವರಲ್ಲಿ ಕೆಲವರು ಕೇರಳದ ಗಣಿ ಮತ್ತು ಕಲ್ಲು ಕೊರೆಯುವ ಕೆಲಸ ಹಾಗೂ ಇನ್ನು ಕೆಲವರು ಬೆಂಗಳೂರಿನ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಿದ್ದು, ಅವರ ಜತೆ ಬಂದ ಸ್ನೇಹಿತರ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದೇವೆ. ಕೊರೊನಾ ಶಂಕಿತ ವ್ಯಕ್ತಿ ಇದ್ದರೆ ಪೊಲೀಸರಿಗೆ ಮಾಹಿತಿ ನೀಡುತ್ತೇವೆ’ ಎಂದರು.
‘ನಮಗೆ ಸಮವಸ್ತ್ರ ಮತ್ತು ಹೆಚ್ಚಿನ ಜಾಗೃತಿಗಾಗಿ ಪರಿಕರಗಳನ್ನು ನೀಡಿದರೆ ಇನ್ನೂ ಹೆಚ್ಚಿನ ನಿಗಾ ವಹಿಸಬಹುದು’ ಎಂದು ಆರೋಗ್ಯ ಇಲಾಖೆಯ ಕಾರ್ಯಕರ್ತರು ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಂಗಳೂರಿನಿಂದ ಬಂದ ಒಬ್ಬ ವ್ಯಕ್ತಿಗೆ ಗಂಟಲು ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಪ್ರಕಾಶ್, ಆರೋಗ್ಯ ಕಾರ್ಯಕರ್ತ ಸುನಿಲ್, ಆಶಾಕರ್ತೆ ಕರಿಬಸಮ್ಮ ಇದ್ದರು.
ಗ್ರಾಮದಲ್ಲಿ ಪೋಲಿಸ್ ಸಿಬ್ಬಂದಿ ಜನಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀಸುವ ಅಂಗಡಿಗಳನ್ನು ಬಿಟ್ಟು ಎಲ್ಲ ಅಂಗಡಿಗಳನ್ನು ಮುಚ್ಚಿಸುವಲ್ಲಿ ಕಾರ್ಯನಿರತರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.