ADVERTISEMENT

ಸಿರಿಗೆರೆ| ಉದ್ಯೋಗ ಮೇಳ: 200 ಯುವಜನರಿಗೆ ಉದ್ಯೋಗ

ವೇದಾಂತ ಫೌಂಡೇಷನ್ ಮತ್ತು ಹುಬ್ಬಳ್ಳಿಯ ಗುರುಕುಲ್ ಸ್ಕಿಲ್ಸ್ ಮತ್ತು ವೇದಾಂತ ಸೇಸಾ ಗೋವಾದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:40 IST
Last Updated 3 ಆಗಸ್ಟ್ 2025, 6:40 IST
ಸಿರಿಗೆರೆಯಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಲಾಯಿತು
ಸಿರಿಗೆರೆಯಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಲಾಯಿತು   

ಸಿರಿಗೆರೆ: ಇಲ್ಲಿನ ಎಂ. ಬಸವಯ್ಯ ವಸತಿ ಪದವಿ ಕಾಲೇಜಿನಲ್ಲಿ ವೇದಾಂತ ಫೌಂಡೇಷನ್ ಮತ್ತು ಹುಬ್ಬಳ್ಳಿಯ ಗುರುಕುಲ್ ಸ್ಕಿಲ್ಸ್ ಮತ್ತು ವೇದಾಂತ ಸೇಸಾ ಗೋವಾ ಆಯೋಜಿಸಲಾಗಿದ್ದ ‘ಉದ್ಯೋಗ ಮೇಳ 2025’ರಲ್ಲಿ 200 ಯುವಜನರು ಉದ್ಯೋಗ ಪಡೆದುಕೊಂಡಿದ್ದಾರೆ. 

ಉದ್ಯೋಗ ಮೇಳದಲ್ಲಿ 550ಕ್ಕೂ ಹೆಚ್ಚು ಯುವಕರು ನೋಂದಾಯಿಸಿಕೊಂಡಿದ್ದರು. ಸಂದರ್ಶನ ಪ್ರಕ್ರಿಯೆಯ ನಂತರ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಾಟಾ ಎಲೆಕ್ಟ್ರಾನಿಕ್ಸ್, ಟಾಟಾ ಕ್ರೋಮಾ, ಕೊಟಕ್ ಮಹೀಂದ್ರ ಬ್ಯಾಂಕ್, ಎಲ್ ಆ್ಯಂಡ್‌ ಟಿ ಫೈನಾನ್ಸ್ ಮತ್ತು ಸ್ಥಳೀಯ ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದರು.

ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ವಾಮದೇವಪ್ಪ ಮಾತನಾಡಿ, ‘ಉದ್ಯೋಗಾಕಾಂಕ್ಷಿ ಯುವಪೀಳಿಗೆಗೆ ಇಂತಹ ಉದ್ಯೋಗ ಮೇಳಗಳು ಅತ್ಯುತ್ತಮ ಅವಕಾಶ ಕಲ್ಪಿಸುತ್ತವೆ. ಈ ಮಹತ್ವದ ಯೋಜನೆಯು ನಿರುದ್ಯೋಗ ಪಿಡುಗನ್ನು ಕಡಿಮೆ ಮಾಡಲು ಮತ್ತು ಸ್ಥಳೀಯ ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಆಶಾಭಾವನೆಯನ್ನು ತುಂಬಲು ಸಹಾಯ ಮಾಡುತ್ತದೆ. ನಮ್ಮ ಸುತ್ತಲಿನ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಬಿರುಸಾಗಿದೆ. ಯುವಕರು ಸಿಗುವ ಅವಕಾಶವನ್ನು ಬಳಸಿಕೊಂಡು ಎತ್ತರಕ್ಕೆ ಬೆಳೆಯುವ ಯತ್ನ ಮಾಡಬೇಕು. ಪರಿಶ್ರಮ ನಿಮಗೆ ಯಶಸ್ಸು ತರುತ್ತದೆ’ ಎಂದರು.

ADVERTISEMENT
ಸಿರಿಗೆರೆಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ ಮಾತನಾಡಿದರು

ವೇದಾಂತ - ಐಒಕೆಯ ಸಿಇಒ ಶ್ರೀಶೈಲ ಗೌಡ ಮಾತನಾಡಿ, ‘ಉದ್ಯೋಗ ಮೇಳದ ಮೂಲಕ ಗ್ರಾಮೀಣ ಭಾಗದ ಜನರು ಉದ್ಯೋಗ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಪ್ರದೇಶದ ಯುವಕರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ಸಾಧ್ಯವಾಗಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ’ ಎಂದರು.

ಎಂಬಿಆರ್ ಪದವಿ ಕಾಲೇಜು ಪ್ರಾಂಶುಪಾಲ ಕೆ.ಶಿವಬಸವ ಕುಟುಗಿಮಠ, ಗುರುಕುಲ್ ಸ್ಕಿಲ್ಸ್ ಸಂಸ್ಥಾಪಕ ಮತ್ತು ಸಿಇಒ ಗುರುನಾಥಗೌಡ ಕುರಗುಂದ ಇದ್ದರು.

ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಆಕಾಂಕ್ಷಿಗಳು
ಅವಕಾಶ ಒದಗಿಸಿದ ಮೇಳ
‘ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಎಂ.ಕಾಂ ನಂತರ ನಾನು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೆ. ಆದರೆ ಸೂಕ್ತ ಅವಕಾಶವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಈ ಉದ್ಯೋಗ ಮೇಳವು ನನಗೆ ಟಾಟಾ ಎಲೆಕ್ಟ್ರಾನಿಕ್ಸ್‌ ಕಂಪನಿಯಲ್ಲಿ ಅವಕಾಶ ಒದಗಿಸಿದೆ. ಇದರಿಂದ ನನಗೆ ಮತ್ತು ಕುಟುಂಬಕ್ಕೆ ನೆರವಾಗಲಿದೆ’ ಎಂದು  ಮೇಳದಲ್ಲಿ ಉದ್ಯೋಗ ಪಡೆದ ತಣಿಗೆಹಳ್ಳಿ ಗ್ರಾಮದ ಇ.ಸೌಂದರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.