ADVERTISEMENT

ಕಳವು ತಡೆಯಲು ಮುಂದಾದ ತಂದೆಯನ್ನು ಒದ್ದು ಕೊಂದ ಮಗ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 6:09 IST
Last Updated 25 ಜನವರಿ 2022, 6:09 IST
ಆರೋಪಿ ಲೋಕೇಶ್
ಆರೋಪಿ ಲೋಕೇಶ್   

ನಾಯಕನಹಟ್ಟಿ (ಚಿತ್ರದುರ್ಗ): ಕಳವು ಮಾಡಲು ಹೋಗುತ್ತಿದ್ದ ಮಗನನ್ನು ತಡೆಯಲು ಮುಂದಾದ ತಂದೆಯನ್ನು ಒದ್ದು ಕೊಲೆ ಮಾಡಿದ ಘಟನೆ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ‌ ಭರಮಸಾಗರ ಕಪಿಲೆಯಲ್ಲಿ ಸೋಮವಾರ ಮಧ್ಯೆರಾತ್ರಿ ನಡೆದಿದೆ.

ಗುಡ್ಲು ಮಲ್ಲಯ್ಯ (70) ಹತ್ಯೆಗೀಡಾದವರು. ಮಗ ಲೋಕೇಶ (28) ಕೃತ್ಯವೆಸಗಿದ ಆರೋಪಿ.

ಲೋಕೇಶನು ಹಲವು ದಿನಗಳಿಂದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಈ ಬಗ್ಗೆ ನಾಯಕನಹಟ್ಟಿ, ತಳಕು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಇದರಿಂದ ಇಡೀ ಕುಟುಂಬ ತಲೆತಗ್ಗಿಸುವ ಸನ್ನಿವೇಶ ಎದುರಾಗಿತ್ತು. ಕಳವು ಮಾಡಬೇಡ ಎಂದು ಕುಟುಂಬದ ಎಲ್ಲ ಸದಸ್ಯರು ಹಲವು ಬಾರಿ ಬುದ್ದಿವಾದ ಹೇಳಿದರೂ ಲೋಕೇಶ ಕೃತ್ಯವೆಸಗುವುದನ್ನು ಬಿಟ್ಟಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸೋಮವಾರ ರಾತ್ರಿ ಇದೇ ವಿಷಯಕ್ಕೆ ತಂದೆ ಮತ್ತು ಮಗನ‌ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹಗ್ಗದಿಂದ ಮಗನ ಕೈಗಳನ್ನು ಕಟ್ಟಿಹಾಕಿದರೆ ಎಲ್ಲಿಯೂ ಹೋಗುವುದಿಲ್ಲ ಎಂದು ಮಲ್ಲಯ್ಯ ಹಗ್ಗ ಹಿಡಿದು ಕೈಕಾಲು ಕಟ್ಟಲು ಮುಂದಾಗಿದ್ದಾರೆ. ಈ ವೇಳೆ ಲೋಕೇಶಕಾಲಿನಿಂದ ಜೋರಾಗಿ ಒದ್ದಿದ್ದಾನೆ. ಒದ್ದ ರಭಸಕ್ಕೆ ಹಿಂಬದಿಯಲ್ಲಿದ್ದ ಕಲ್ಲಿಗೆ ಬಿದ್ದ ಪರಿಣಾಮ ಗುಡ್ಲುಮಲ್ಲಯ್ಯ ತೀರ್ವ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಇದರಿಂದ ಗಾಬರಿಗೊಂಡ‌ ಮನೆಯ ಇತರೆ ಸದಸ್ಯರು ಲೋಕೇಶನನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಮಂಗಳವಾರ ಬೆಳಿಗ್ಗೆ ನಾಯಕನಹಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಸಿಪಿಐ ರಮಾಕಾಂತ್, ಪಿಎಸ್ ಐ ಮಹೇಶ ಲಕ್ಷ್ಮಣ ಹೊಸಪೇಟೆ, ಎಎಸ್ ಐ ನಾಗರಾಜ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.