ಹಿರಿಯೂರು: ಊರಿಗೆ ಮದುವೆಯಾಗಿ ಬಂದ ಸೊಸೆಯಂದಿರು ಕುಣಿಯದಿದ್ದರೆ ಗ್ರಾಮ ದೇವತೆ ಗೊಲ್ಲಾಳಮ್ಮ ಕುಣಿಯುತ್ತಾಳೆ. ಹೀಗಾಗಿ ಗೊಲ್ಲಾಳಮ್ಮನ ಅಪ್ಪಣೆಯಂತೆ ಅನಾದಿ ಕಾಲದಿಂದ ಸೊಸೆಯಂದಿರು ದಸರಾ ಉತ್ಸವದ ಸಂದರ್ಭದಲ್ಲಿ ಕುಣಿಯುವುದು ಈ ಊರಿನಲ್ಲಿ ವಾಡಿಕೆ.
ತಾಲ್ಲೂಕಿನ ಬಾಲೇನಹಳ್ಳಿಯಲ್ಲಿ ಮೈಸೂರಿನಲ್ಲಿ ಆಚರಿಸುವ ವೈಭವದ ದಸರಾ ಹಬ್ಬದ ರೀತಿ ಕಾಡುಗೊಲ್ಲ ಜನಾಂಗದ ಸಾವಿರ ಒಕ್ಕಲಿನವರು ವಾರಗಟ್ಟಲೆ ವೈಭವದಿಂದ ಹಬ್ಬ ಆಚರಿಸುತ್ತ ಬಂದಿದ್ದಾರೆ. ಕೊನೆಯ ದಿನ ಭಂಡಾರದ ಉತ್ಸವ ನಡೆಯುತ್ತದೆ. ಅಂದು ಸೊಸೆಯಂದಿರು ಸೀರೆ ಉಟ್ಟು, ಕೈಯಲ್ಲಿ ಬೇವಿನ ಸೊಪ್ಪು ಹಿಡಿದು ಗೊಲ್ಲಾಳಮ್ಮನ ದೇವಸ್ಥಾನದಿಂದ ಹನುಮಂತ ದೇವಸ್ಥಾನದವರೆಗೆ ಕುಣಿಯುತ್ತ ಸಾಗುತ್ತಾರೆ. ಮದುವೆಯಾಗಿ ಬರುವ ಎಲ್ಲಾ ಸೊಸೆಯಂದಿರು ಭಂಡಾರ ಉತ್ಸವದಲ್ಲಿ ತಪ್ಪದೆ ಹೆಜ್ಜೆ ಹಾಕುತ್ತಾರೆ. ಉತ್ಸವದಲ್ಲಿ ಸೋಮನು ಸೊಸೆಯಂದಿರ ಜೊತೆ ಕುಣಿಯುವುದು ವಿಶೇಷ.
ಇಂತಹ ಒಂದು ವಿಶೇಷ ಆಚರಣೆ ಬಾಲೇನಹಳ್ಳಿಯಲ್ಲಿ ಸೋಮವಾರ ನಡೆಯಿತು. ಗ್ರಾಮದ ಎಲ್ಲಾ ಸೊಸೆಯಂದಿರು ದೇವಸ್ಥಾನದ ಹತ್ತಿರ ಕಡ್ಡಾಯವಾಗಿ ಹೋಗಲೇಬೇಕು. ಭಂಡಾರ ಹಚ್ಚಿದಾಕ್ಷಣ ಸೊಸೆಯಂದಿರು ತಂತಾನೆ ಕುಣಿಯಲು ಆರಂಭಿಸುತ್ತಾರೆ. ಗೊಲ್ಲಾಳಮ್ಮ ದೇವಿ ಸಂತೃಪ್ತಳಾಗಿರಲಿ. ಗ್ರಾಮಕ್ಕೆ ಒಳಿತು ಮಾಡಲಿ ಎಂಬುದು ಇದರ ಹಿಂದಿನ ಉದ್ದೇಶ ಎಂಬುದು ಗ್ರಾಮಸ್ಥರ ನಂಬಿಕೆ.
ವಿಜಯದಶಮಿ ಅಂಬಿನೋತ್ಸವದೊಂದಿಗೆ ಆರಂಭವಾಗುವ ಈ ಜಾತ್ರೆ, ಏಕಾದಶಿ ವಿಶೇಷ ಪೂಜೆ, ದ್ವಾದಶಿ ಹರಿಸೇವೆ, ಕುರಿ ಕರೆಯುವ ಉತ್ಸವ, ಪಲ್ಲಕ್ಕಿ ಉತ್ಸವ, ಆರತಿ, ಸಿಡಿ ಮದ್ದಿನ ಉತ್ಸವದ ಮರುದಿನ ಭಂಡಾರ ಉತ್ಸವ ನಡೆಯುತ್ತದೆ. ಉತ್ಸವದಲ್ಲಿ ಸೊಸೆಯಂದಿರು ಸೀರೆ ಉಟ್ಟು, ಕೈಯಲ್ಲಿ ಬೇವಿನ ಸೊಪ್ಪು ಹಿಡಿದು, ದೇವಿಯ ಭಂಡಾರವನ್ನು ಹಣೆಗೆ ಇಟ್ಟುಕೊಂಡು, ಉರುಮೆ ಹಾಗೂ ತಮಟೆ ವಾದ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಹರಕೆ ತೀರಿಸಿದರು.
ಚಿತ್ತಮುತ್ತಿ ಕುಲದ ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು ಶ್ರೀದೇವಿಯ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಕರಡಿಗೊಲ್ಲರ ಬೆಡಗಿನ ಮನೆಗೆ ಸೊಸೆಯಾಗಿ ಬಂದವರು ಭಂಡಾರ ಉತ್ಸವದಲ್ಲಿ ಭಾಗಿಯಾಗಿ ಕುಣಿಯುವ ಆಚರಣೆ ಮಾಡಿಕೊಂಡು ಬರುತ್ತಿರುವುದನ್ನು ಇಲ್ಲಿ ಮಾತ್ರ ಕಾಣಬಹುದು. ಸೊಸೆಯಂದಿರು ಮುತ್ತೈದೆಯರಾಗಿರುವವರೆಗೆ ಹಬ್ಬದಲ್ಲಿ ಕುಣಿಯುತ್ತಾರೆ ಎಂದು ಹಿರಿಯರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.