ಚಿತ್ರದುರ್ಗ: ಅಧಿಕಾರದಲ್ಲಿ ಮೈಮರೆತರೆ ಬಿಜೆಪಿ ವೈಭವ ಮುಕ್ಕಾಗುವುದು ನಿಶ್ಚಿತ. ಎಚ್ಚರಿಕೆಯಿಂದ ಕೆಲಸ ಮಾಡಿದರೆ ಮಾತ್ರ ಬಿಜೆಪಿ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಹೋರಾಟಕ್ಕೆ ವಿಷಯಗಳಿಲ್ಲವೆಂದು ಸುಮ್ಮನೆ ಕುಳಿತುಕೊಳ್ಳಬೇಡಿ. ಲವ್ ಜಿಹಾದ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಕ್ರಿಯಾಶೀಲತೆಯಿಂದ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.
‘ಬಹುತೇಕರು ಫೇಸ್ಬುಕ್, ಫ್ಲೆಕ್ಸ್ಗಳಲ್ಲಿ ನಾಯಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುವುದನ್ನು ಬದ್ಧತೆ ಅಂದುಕೊಂಡಿದ್ದಾರೆ. ನಾಯಕರ ಹಿಂದೆ ತಿರುಗುವುದನ್ನೇ ಪರಿಶ್ರಮವೆಂದು ನಂಬಿದ್ದಾರೆ. ಮತ್ತೊಬ್ಬರ ಬಾಲಂಗೋಚಿ ಆಗಬೇಡಿ. ದೇಶ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡಿ ನಾಯಕರಾಗಿ’ ಎಂದು ಕಿವಿಮಾತು ಹೇಳಿದರು.
‘ಜಾತಿ ವೈಭವೀಕರಣ ಮಾಡುವುದನ್ನೇ ಆದರ್ಶವೆಂದು ಭಾವಿಸಿದಂತೆ ಕಾಣುತ್ತಿದೆ. ಚುನಾವಣೆಗೆ ಹಣ ವೆಚ್ಚ ಮಾಡುವುದು ಸಾಮರ್ಥ್ಯ ಎಂಬಂತೆ ನೋಡಲಾಗುತ್ತಿದೆ. ಬದ್ಧತೆಯಿಂದ ಪಕ್ಷಕ್ಕೆ ಕಾರ್ಯನಿರ್ವಹಿಸುವವರು ಇದರಿಂದ ವಿಚಲಿತವಾಗುವ ಅಗತ್ಯವಿಲ್ಲ. ಮುಂದೊಂದು ದಿನ ಇದು ಬದಲಾಗಲಿದೆ. ಪರಿವರ್ತನೆಯ ಕಾಲ ಬರುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.