ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಚೆನ್ನಮ್ಮ ನಾಗತಿಹಳ್ಳಿಯಲ್ಲಿ ಶತಮಾನಗಳ ಹಿಂದಿನ 13 ತಾಳೆಗರಿಗಳು ಪತ್ತೆಯಾಗಿದ್ದು, ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ.
ಪ್ರಾಚ್ಯವಸ್ತು ಸರ್ವೇಕ್ಷಣಾ ಕ್ಷೇತ್ರ ಕಾರ್ಯಕ್ಕೆ ತೆರಳಿದ ವಸ್ತುಸಂಗ್ರಹಾಲಯದ ಸಹಾಯಕ ನಿರ್ದೇಶಕ ಜಿ.ಪ್ರಾಹ್ಲಾದ್ ಅವರು ಇವುಗಳನ್ನು ಪತ್ತೆ ಮಾಡಿದ್ದಾರೆ. ಗ್ರಾಮದ ತುಪ್ಪದ ಕಾಮಾಕ್ಷಮ್ಮ ಎಂಬುವರ ಮನೆಯಲ್ಲಿ ಇವು ಸಿಕ್ಕಿವೆ.
‘ತಾತ ಟಿ.ಷಡಾಕ್ಷರಪ್ಪ ಅವರು ಮೈಸೂರು ಸಂಸ್ಥಾನದಲ್ಲಿ 16 ವರ್ಷ ಕೆಲಸ ಮಾಡಿದ್ದರು. ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದ ಅವರು ಸಂಸ್ಥಾನದೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು. ಅಲ್ಲದೇ ಅದಕ್ಕೂ ಪೂರ್ವದಿಂದಲೂ ಮನೆಯಲ್ಲಿ ತಾಳೆಗರಿಗಳು ಇದ್ದವು’ ಎಂದು ಕಾಮಾಕ್ಷಮ್ಮ ಅವರ ಪುತ್ರ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
‘ಹರಿಹರನ ಗಿರಿಜಾ ಕಲ್ಯಾಣ, ಯಡಿಯೂರು ಸಿದ್ಧಲಿಂಗೇಶ್ವರರ ವಚನ, ರಾಮಗಿರಿ ಸಿದ್ದೇಶ್ವರ ಚರಿತೆ, ಕುರುಬರ ರಟ್ಟಮತ ಶಾಸ್ತ್ರ ಸೇರಿ ಇನ್ನೂ ಅನೇಕ ತಾಳೆಗರಿಗಳು ವಸ್ತುಸಂಗ್ರಹಾಲಯದಲ್ಲಿವೆ. ಆಸಕ್ತರು ಸಂಶೋಧನೆ ಹಾಗೂ ಅಧ್ಯಯನಕ್ಕೆ ಬಳಸಿಕೊಳ್ಳಬಹುದು’ ಎಂದು ಪ್ರಹ್ಲಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.