ಸಿರಿಗೆರೆ: ‘ಕೇವಲ ಅಂಕಗಳಿಗಷ್ಟೇ ಪ್ರಾಮುಖ್ಯತೆ ನೀಡದೆ, ಸುಂದರ ಬದುಕನ್ನು ರೂಪಿಸುವಂತಹ ಶಿಕ್ಷಣವನ್ನು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ಸಿಗುತ್ತಿರುವುದು ಸಂತಸ ತಂದಿದೆ’ ಎಂದು ನಟ, ನೃತ್ಯ ಕಲಾವಿದ ಶ್ರೀಧರ್ ತಿಳಿಸಿದರು.
ಸಿರಿಗೆರೆಯಲ್ಲಿ ಸೋಮವಾರ ಆರಂಭಗೊಂಡ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
‘ಇಲ್ಲಿಯ ಮಕ್ಕಳ ಕಲಾ ಪ್ರದರ್ಶನಗಳನ್ನು ಕಂಡು ನನ್ನ ಹೃದಯ ತುಂಬಿದೆ. ಇಂತಹ ಶಿಕ್ಷಣ ಕೇವಲ ಬೆಂಗಳೂರಿನಂತಹ ನಗರಗಳಲ್ಲಿ ಮಾತ್ರ ದೊರೆಯುತ್ತಿಲ್ಲ. ಸಿರಿಗೆರೆಯಲ್ಲಿಯೂ ಸಿಗುತ್ತಿದೆ. ಇಲ್ಲಿಯ ಮಕ್ಕಳು ಆ ಸಾಧನೆ ಮಾಡುತ್ತಿದ್ದಾರೆ. ಈ ಕ್ಷೇತ್ರಕ್ಕೆ ಬಂದು ಶರಣಭಾವದಲ್ಲಿ ಮಿಂದಿದ್ದೇನೆ. ಶಿವಮೂರ್ತಿ ಶ್ರೀಗಳು ನಾಡಿನ ಪ್ರಖಾಂಡ ಪಂಡಿತರು, ಶ್ರೇಷ್ಠ ವಿದ್ವಾಂಸರು, ಅವರಲ್ಲಿ ಮಗುವಿನ ಮನಸ್ಸು ಕಂಡಿದ್ದೇನೆ’ ಎಂದರು.
‘ವಕುಮಾರ ಶ್ರೀಗಳ ಕಾಲದಿಂದಲೂ ತರಳಬಾಳು ಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಸಿಗುತ್ತಿದೆ‘ ಎಂದು ಶಿವಮೊಗ್ಗ ಕೃಷಿ ವಿವಿ ಕುಲಪತಿ ಆರ್.ಸಿ ಜಗದೀಶ್ ತಿಳಿಸಿದರು.
ಜಗಳೂರು ಶಾಸಕ ದೇವೇಂದ್ರಪ್ಪ, ಎಂಎಲ್ಸಿ ಕೆ.ಎಸ್. ನವೀನ್, ಬೆಸ್ಕಾಂ ಎಂಜಿನಿಯರ್ ಕೋಮಲ, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಕುವೆಂಪು ವಿವಿ ಪ್ರಾಧ್ಯಾಪಕ ಬಸವರಾಜ ನೆಲ್ಲಿಸರ ಮಾತನಾಡಿದರು.
ಬೆಂಗಳೂರಿನ ಬೇಲಿಮಠದ ಶಿವರುದ್ರಸ್ವಾಮೀಜಿ ಆಶೀರ್ವಚನ ನೀಡಿದರು. ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಲಾ ಕಾಲೇಜು ಮಕ್ಕಳು ಹಲವು ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನ ನೀಡಿದರು.
ಸನ್ಮಾನ ಸಮಾರಂಭ: ರಾಜ್ಯದಲ್ಲಿನ ಮಠಗಳು, ಮುಖ್ಯವಾಗಿ ಸಿರಿಗೆರೆ, ಸಿದ್ಧಗಂಗಾ, ಸುತ್ತೂರು ಮಠಗಳು ಅಗತ್ಯ ಇರುವ ಸಮುದಾಯಗಳಿಗೆ ಅನ್ನ, ಅಕ್ಷರ, ಅರಿವು ನೀಡುವ ಮೂಲಕ ದೊಡ್ಡ ಕೆಲಸ ಮಾಡುತ್ತಿವೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದರು.
ಪ್ರತಿಭಾನ್ವಿತರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಡಿದರು.
‘ಅಕ್ಷರ ವಂಚಿತವಾಗಿದ್ದ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವಂತಹ ಮಹತ್ ಕಾರ್ಯಕ್ಕೆ ಶಿವಕುಮಾರ ಸ್ವಾಮೀಜಿ ಮುಂದಾದ ಪ್ರಯುಕ್ತ ಸಮುದಾಯದಲ್ಲಿ ಶಿಕ್ಷಣದ ಜಾಗೃತಿಯಾಗಿದೆ. ಸಾಮಾಜಿಕ ಕಳಕಳಿ ಅವರಲ್ಲಿ ಇದ್ದುದರಿಂದ ಅವರು ಈ ಕಾರ್ಯಕ್ಕೆ ಮುಂದಾದರು’
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ , ಸಂಸ್ಥೆಯ ವಿಶೇಷಾಧಿಕಾರಿ ವೀರಣ್ಣ ಎಸ್. ಜತ್ತಿ ಇದ್ದರು. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ದ್ವಿತೀಯ ಪಿಯಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಎಸ್. ಅನಿತಾಗೆ ಚಿನ್ನದ ಪದಕ ನೀಡಿ ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.