ADVERTISEMENT

ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ: ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 7:26 IST
Last Updated 17 ನವೆಂಬರ್ 2025, 7:26 IST
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಟುಂಬ ಪ್ರಬೋದನ್‌ ಕಾರ್ಯಕ್ರಮವನ್ನು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಉದ್ಘಾಟಿಸಿದರು
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಟುಂಬ ಪ್ರಬೋದನ್‌ ಕಾರ್ಯಕ್ರಮವನ್ನು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಉದ್ಘಾಟಿಸಿದರು   

ಚಿತ್ರದುರ್ಗ: ‘ಪೋಷಕರು ತಮ್ಮ ಮಕ್ಕಳನ್ನು ಅಂಕಗಳಿಸುವ ಯಂತ್ರಗಳನ್ನಾಗಿ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸರಿಯಾದ ರೀತಿಯಲ್ಲಿ ಸಂಸ್ಕಾರ ಕಲಿಸುತ್ತಿಲ್ಲ’ ಎಂದು ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣವರ್‌ ಬೇಸರ ವ್ಯಕ್ತಪಡಿಸಿದರು.

ನಗರದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಸ್ವದೇಶಿ ಜಾಗರಣ ಮಂಚ್‌ನಿಂದ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಟುಂಬ ಪ್ರಬೋದನ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಾರತದಲ್ಲಿ ಕುಟುಂಬ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಇದು ನಮ್ಮ ಮಣ್ಣಿನ ಗುಣ. ಇನ್ನಾದರೂ ಎಚ್ಚೇತ್ತು ಮಕ್ಕಳಿಗೆ ಸಂಸ್ಕಾರ ಕಲಿಸಿ’ ಎಂದರು.

ADVERTISEMENT

‘ಹಿಂದಿನ ಕಾಲದಲ್ಲಿ ಒಂದು ಮನೆಯಲ್ಲಿ 25 ರಿಂದ 30 ಜನ ಇರುತ್ತಿದ್ದರು. ಆದರೆ, ಇಂದಿನ ದಿನಮಾನದಲ್ಲಿ ಕುಟುಂಬ ವ್ಯವಸ್ಥೆ ಕ್ಷೀಣಿಸುತ್ತಿದ್ದು, ವ್ಯಾಜ್ಯಗಳು ಹೆಚ್ಚಾಗಿವೆ. ನ್ಯಾಯಾಲಯದಲ್ಲಿಯೂ ಸಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ’ ಎಂದರು.

‘ಮಕ್ಕಳಿಗೆ ಜೀವನ ಶೈಲಿಯನ್ನು ಸರಿಯಾದ ರೀತಿಯಲ್ಲಿ ಕಲಿಸುತ್ತಿಲ್ಲ. ಕುಟುಂಬ ಎಂದರೆ ಏನು ಎಂಬುದನ್ನು ಹೇಳಿಕೊಡುತ್ತಿಲ್ಲ. ಆಚಾರ, ವಿಚಾರ, ಸಂಪ್ರದಾಯವನ್ನು ಕಲಿಸಬೇಕು. ಇಲ್ಲವಾದರೆ ಕುಟುಂಬ ವ್ಯವಸ್ಥೆ ದೂರವಾಗುತ್ತದೆ’ ಎಂದು ಎಚ್ಚರಿಸಿದರು.

‘ನಾವು ಇಂದ್ರಿಯಗಳನ್ನು ನಿಗ್ರಹಿಸಬೇಕಿದೆ. ಆಗ ಮಾತ್ರ ನಮ್ಮಲ್ಲಿ ಸಮತೋಲನವಾದ ಕುಟುಂಬಗಳು ಇರಲು ಸಾಧ್ಯವಾಗುತ್ತದೆ. ಅವಿಭಕ್ತ ಕುಟುಂಬದ ಸಂಖ್ಯೆ ಕಡಿಮೆಯಾಗುತ್ತಿರುವ ಪರಿಣಾಮ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ’ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.

‘ರಾತ್ರಿ ಮಲಗುವ ಮುನ್ನ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ದೇಹ, ಮನಸ್ಸನ್ನು ಸಮತೋಲನಕ್ಕೆ ತರಬಹುದು. ಜತೆಗೆ ಮನಸ್ಸು ಪ್ರಶಾಂತವಾಗಿ ಇರುತ್ತದೆ’ ಎಂದರು.

‘ಕುಟುಂಬ ಎಂಬ ಪದ ಸರಳವಾಗಿದ್ದರೂ ಅದು ಮಹತ್ವದ್ದಾಗಿದೆ. ಭಾರತ ಪುರಾತನ ದೇಶವಾಗಿದ್ದು, ಇದರಲ್ಲಿ ಸಂಸ್ಕೃತಿ ವೈವಿಧ್ಯಮಯವಾಗಿದೆ. ಆದರೆ, ನಾವು ನಮ್ಮ ಪುರಾತನ ಪದ್ಧತಿ ಬಿಟ್ಟು ವಿದೇಶಿ ಸಂಸ್ಕೃತಿ, ಸಂಪ್ರದಾಯ ಅನುಕರಣೆ ಮಾಡುತ್ತಿದ್ದೇವೆ. ಇದರ ಫಲವಾಗಿ ಕುಟುಂಬಗಳು ವಿಭಜನೆಗೊಳ್ಳುತ್ತಿವೆ’ ಎಂದು ಕುಟುಂಬ ಪ್ರಬೋದನ್‌ ರಾಜ್ಯ ಘಟಕದ ಸಹ ಸಂಚಾಲಕ ಕುಮಾರಸ್ವಾಮಿ ತಿಳಿಸಿದರು.

ಮೇಳದ ಸಂಘಟಕ ಜಗದೀಶ್‌, ಸಂಯೋಜಕ ಕೆ.ಎಸ್‌. ನವೀನ್, ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಮಲ್ಲಿಕಾರ್ಜುನ್‌, ಗಾಯತ್ರಿ ಶಿವರಾಂ, ನಾಗರಾಜ್ ಸಂಗಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.