ಚಿತ್ರದುರ್ಗ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೇ 22ರಿಂದ ವಿಶೇಷ ಆಂದೋಲನ ಆರಂಭವಾಗಿದ್ದು ಜೂನ್ 5 ರವರೆಗೂ ಮುಂದುವರಿಯಲಿದೆ. ‘ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು’ ಈ ಬಾರಿಯ ಘೋಷವಾಕ್ಯವಾಗಿದ್ದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು. ಪ್ಲಾಸ್ಟಿಕ್ ಮುಕ್ತ ಗ್ರಾಮ ನಿರ್ಮಾಣವೇ ಗುರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯು ಸ್ವಚ್ಛ ಭಾರತ್ ಮಿಷನ್ ಯೋಜನೆಯ ಭಾಗವಾಗಿದೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಅಭಿಯಾನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುವ ದುಷ್ಪಾರಿಣಾಮಗಳು ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮ, ಚಟುವಟಿಕೆ, ಶ್ರಮದಾನ, ಸಂವಾದ ಸಭೆಗಳನ್ನು ಆಯೋಜನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದಾರೆ.
ಈ ವಿಶೇಷ ಆಂದೋಲನದಲ್ಲಿ ಜಲಮೂಲಗಳ ಸುತ್ತಮುತ್ತ ಸ್ವಚ್ಛಗೊಳಿಸುವುದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬ್ಲಾಕ್ ಸ್ಪಾಟ್ ಗುರುತಿಸಿ ಕಸ ಎಸೆಯುವುದನ್ನು ತಡೆಯುವುದು ಗುರಿಯಾಗಿದೆ. ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು, ಥರ್ಮಕೋಲ್, ಪ್ಲಾಸ್ಟಿಕ್ ಬ್ಯಾಗ್ಗಳು, ಪಾಲಿಥಿನ್ ಬ್ಯಾಗ್ಗಳು, ಶ್ಯಾಂಪು ಬಾಟಲಿಗಳು, ಇಯರ್ ಬಡ್ಸ್, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ರೂಪದ ಗಾಜುಗಳು, ಐಸ್ಕ್ರೀಂ ಕಡ್ಡಿಗಳು, ಆಹ್ವಾನ ಪತ್ರಿಕೆ, ಸಿಗರೇಟ್ ಪ್ಯಾಕ್ ಎಸೆಯದಂತೆ ಜಾಗೃತಿ ಮೂಡಿಸಬೇಕು.
ಪ್ಲಾಸ್ಟಿಕ್ ವಸ್ತು ಮತ್ತು ಕವರ್ ಉತ್ಪಾದಿಸುವ, ಮಾರಾಟ ಮಾಡುವ ಗ್ರಾಹಕರಿಗೆ ನೀಡುವ ಅಂಗಡಿ, ಹೋಟೆಲ್, ಬೇಕರಿ ಇತರೆ ವಾಣಿಜ್ಯ ಮಳಿಗೆಗಳಿಗೆ ತಪಾಸಣೆ ಮಾಡಲಾಗುತ್ತಿದೆ. ಬಳಕೆಯಾದ ಪ್ಲಾಸ್ಟಿಕ್ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡುವಂತೆ ಪ್ರೇರೇಪಿಸುವ ಚಟುವಟಿಕೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳ ಬಗ್ಗೆ ಗಮನಹರಿಸುವುದು, ಜಲಮೂಲಗಳನ್ನು ಪ್ಲಾಸ್ಟಿಕ್ ಹಾವಳಿಯಿಂದ ರಕ್ಷಣೆ ಮಾಡುವುದು, ಪ್ಲಾಸ್ಟಿಕ್ ವೈಜ್ಞಾನಿಕ ವಿಲೇವಾರಿಗೆ ಕ್ರಮವಹಿಸುವುದು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆಗೆ ಸ್ಥಳ ಗುರುತಿಸುವುದು ವಿಶೇಷ ಆಂದೋಲನ ಪ್ರಮುಖ ಹೆಜ್ಜೆಯಾಗಿದೆ.
ಜಾಗೃತಿ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿದಿಗಳು, ಯುವಕರು, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಮತ್ತು ಸ್ವಯಂ ಸೇವಕರು, ಗ್ರಾಮದ ಮುಖಂಡರು ಅಭಿಯಾನದಲ್ಲಿ ಭಾಗವಹಿಸಿ, ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ರೂಪಿಸಲು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.